ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ ಆರೋಪ ಮತ್ತು ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಗೃಹಬಂಧನದಲ್ಲಿರುವ ಹೋರಾಟಗಾರರ ಗೃಹಬಂಧನವನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 12ರವರೆದೂ ವಿಸ್ತರಣೆ ಮಾಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ವಿಶೇಷ ಪೀಠ ತನಿಖಾಧಿಕಾರಿಗಳ ಮನವಿ ಮೇರೆಗೆ ಹೋರಾಟಗಾರರ ಗೃಹಬಂಧನ ಅವಧಿಯನ್ನು ವಿಸ್ತರಣೆ ಮಾಡಿದೆ.
ಈ ಬಗ್ಗೆ ಪುಣೆ ಪೊಲೀಸ್ ಉಪಾಯುಕ್ತರು ಸಲ್ಲಿಕೆ ಮಾಡಿದ್ದ ಅಫಿಡವಿಟ್ ಸ್ವೀಕರಿಸಿದ ಸುಪ್ರೀಂ ಕೋರ್ಟ್, ಎಲ್ಲ ಗೃಹ ಬಂಧನದಲ್ಲಿರುವ ಐದೂ ಹೋರಾಟಗಾರರ ಗೃಹ ಬಂಧನ ಅವಧಿ ವಿಸ್ತರಣೆ ಮಾಡಿದೆ. ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಸಾಕ್ಷ್ಯ ಬಹಿರಂಗ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು.
ಈ ವೇಳೆ ವಿಚಾರಣೆಗೆ ಹಾಜರಿದ್ದ ಪುಣೆ ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೆ ಕಿಡಿಕಾರಿದ ಸುಪ್ರೀಂ ಕೋರ್ಟ್, ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಹೀಗಾಗಿ ನಿಮ್ಮ ಅಧಿಕಾರಿಗಳಿಗೆ ಜವಾಬ್ದಾರಿಯುತವಾಗಿ ವರ್ತಿಸುವಂತೆ ಹೇಳಿ. ಪೊಲೀಸ್ ಅಧಿಕಾರಿಗಳಿಂದ ಸುಪ್ರೀಂ ಕೋರ್ಟ್ ಸರಿಯಲ್ಲ ಎಂದು ಹೇಳುವುದನ್ನು ನಾವು ಕೇಳಲಿಚ್ಛಿಸುವುದಿಲ್ಲ ಎಂದು ಹೇಳಿ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿಕೆ ಮಾಡಿತು.
ನಿನ್ನೆಯಷ್ಟೇ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸರ್ಕಾರ ಗೃಹ ಬಂಧನದಲ್ಲಿರುವ ಎಲ್ಲ ಐದೂ ಹೋರಾಟಗಾರರು ನಿಷೇಧಿತ ನಕ್ಸಲ್ ಸಂಘಟನೆ ಸಿಪಿಐಎಂ ನೊಂದಿಗೆ ಸಂಪರ್ಕದಲ್ಲಿದ್ದರು. ಈ ಬಗ್ಗೆ ತಮಗೆ ಪ್ರಬಲ ಸಾಕ್ಷ್ಯಾಧಾರಗಳು ದೊರೆತಿದ್ದು, ಇದೇ ಕಾರಣಕ್ಕೆ ಅವರನ್ನು ಗೃಹ ಬಂಧನದಲ್ಲಿಡಲಾಗಿದೆಯೇ ಹೊರತು ಅವರ ವಿಚಾರವಾದಿ ತತ್ವಗಳಿಂದಾಗಿ ಅಲ್ಲ ಎಂದು ಸರ್ಕಾರ ಸ್ಪಷ್ಟ ಪಡಿಸಿತ್ತು.