ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ದೊಡ್ಡ ಬಫೂನ್ ಎಂದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ತೀವ್ರವಾಗಿ ಕಿಡಿಕಾರಿದ್ದು, ಈ ಸಂಬಂಧ ಚಂದ್ರಶೇಖರ್ ರಾವ್ ಪುತ್ರ ಕೆ.ತಾರಕರಾಮರಾವ್ ಹಾಗೂ ದಿಗ್ವಿಜಯ್ ಸಿಂಗ್ ನಡುವೆ ಶನಿವಾರ ವಾಗ್ಯುದ್ಧ ನಡೆದಿದೆ.
ಚಂದ್ರಶೇಖರ್ ರಾವ್ ಹೇಳಿಕೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದ ದಿಗ್ವಿಜಯ್ ಸಿಂಗ್ ಅವರು, ರಾಹುಲ್ ಜೀ ವಿರುದ್ಧ ಕೆಸಿಆರ್ ನೀಡಿದ್ದ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಎಂತಹ ಕೃತಜ್ಞತೆ ಇಲ್ಲದ ಮನುಷ್ಯ! ಎಲ್ಲಾ ವಿಚಾರಗಳನ್ನು ಬದಿಗಿರಿಸಿ ಕಾಂಗ್ರೆಸ್ ತೆಲಂಗಾಣ ರಾಜ್ಯವನ್ನು ನೀಡಿತ್ತು. ಇದೀಗ ಈ ವ್ಯಕ್ತಿ ಕಾಂಗ್ರೆಸ್ ಅಧ್ಯಕ್ಷನ ವಿರುದ್ಧವೇ ನಿಂದನಾತ್ಮಕ ಭಾಷೆ ಬಳಕೆ ಮಾಡುತ್ತಿದ್ದಾನೆ. ಕೆಸಿಆರ್'ಗೆ ನಾಚಿಕೆಯಾಗಬೇಕು. ಕೃತಜ್ಞತೆ ಇಲ್ಲದ ನಿಮಗೆ ತೆಲಂಗಾಣ ಜನತೆಯೇ ಶಿಕ್ಷೆ ನೀಡಲಿದ್ದಾರೆಂದು ಹೇಳಿದ್ದರು.
ದಿಗ್ವಿಜಯ್ ಸಿಂಗ್ ಅವರ ಈ ಟ್ವೀಟ್'ಗೆ ಪ್ರತಿಕ್ರಿಯೆ ನೀಡಿರುವ ಚಂದ್ರಶೇಖರ್ ರಾವ್ ಅವರ ಪುತ್ರ ಕೆ.ತಾರಕರಾಮರಾವ್ ಅವರು, ಮೊದಲಿಗೆ ತೆಲಂಗಾಣ ಪದ ಹೇಳುವುದನ್ನು ಕಲಿಯಿರಿ ಸರ್. ಎರಡನೇಯದಾಗಿ ತಂಲಂಗಾಣವನ್ನು ಕಾಂಗ್ರೆಸ್ ನೀಡಿಲ್ಲ. ತೆಲಂಗಾಣವನ್ನು ನೀವು ನಿಮ್ಮ ಭೂಮಿಯೆಂದು ಹಾಗೂ ಜನರು ದೆಹಲಿ ಸುಲ್ತಾನನ ಗುಲಾಮರು ಎಂದು ಭಾವಿಸಿದಂತಿದೆ. ಕೆಸಿಆರ್ ನೇತೃತ್ವದಲ್ಲಿ ನಡೆಸಲಾದ ದೊಡ್ಡ ಚಳುವಳಿಗೆ ಕಾಂಗ್ರೆಸ್ ಪಕ್ಷ ಮಣಿಯುವಂತೆ ಮಾಡಿತ್ತು ಎಂದು ತಿಳಿಸಿದ್ದಾರೆ.
ತೆಲಂಗಾಣ ವಿಧಾನಸಭೆ ವಿಸರ್ಜಿಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಕೆಸಿಆರ್, ರಾಹುಲ್ ಗಾಂಧಿ ಏನೆಂಬುದು ಎಲ್ಲರಿಗೂ ಗೊತ್ತು, ರಾಹುಲ್ ಗಾಂಧಿ ದೇಶದ ದೊಡ್ಡ ಬಫೂನ್. ಆತ ಸಂಸತ್ ನಲ್ಲಿ ಪ್ರಧಾನಿಯನ್ನು ಆಲಿಂಗನ ಮಾಡಿ, ಕಣ್ಣು ಹೊಡೆದಿದ್ದನ್ನು ಎಲ್ಲರೂ ಗಮನಿಸಿದ್ದಾರೆ ಎಂದಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos