ಲಖನೌ: ವಧುವಿಗೆ ಇದ್ದ ವಾಟ್ಸಾಪ್ ಖಯಾಲಿಯಿಂದ ರೋಸಿ ಹೋದ ವರನೊಬ್ಬ ಮದುವೆಯನ್ನೇ ರದ್ದು ಮಾಡಿರುವ ಘಟನೆ ಉತ್ತರಪ್ರದೇಶದ ಅಮರೋಹಾ ಜಿಲ್ಲೆಯಲ್ಲಿ ನಡೆದಿದೆ.
ತಾನು ವಿವಾಹವಾಗುವ ಯುವತಿ ಅತೀ ಹೆಚ್ಚು ವಾಟ್ಸ್ ಆ್ಯಪ್ ಬಳಕೆ ಮಾಡುತ್ತಿದ್ದಾಳೆಂಬ ಕಾರಣ ನೀಡಿದ ವರ ಮದುವೆಯನ್ನು ನಿರಾಕರಿಸಿದ್ದಾನೆಂದು ತಿಳಿದುಬಂದಿದೆ.
ಇನ್ನು ಮತ್ತೊಂದೆಡೆ ವರದಕ್ಷಿಣೆಗೆ ಪಟ್ಟು ಹಿಡಿದಿರುವ ವರ ರೂ. ರೂ.65 ಲಕ್ಷ ನೀಡದೇ ಹೋದರೆ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಸೆಪ್ಟೆಂಬರ್ 5 ರಂದು ವಧುವಿನ ಮನೆಗೆ ವರನ ಕಡೆಯವರು ಹೋಗಬೇಕಿತ್ತು. ಆದರೆ, ಸಂಜೆಯಾದರೂ ಅವರು ಬಾರದ ಕಾರಣ ವಧುವಿನ ಸಹೋದರ ವರನ ತಂದೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಮದುವೆ ರದ್ದು ಮಾಡಿರುವುದಾಗಿ ತಿಳಿಸಿದ್ದಾನೆ.
ನಂತರ ವರನ ತಂದೆ ಖ್ವಾಮರ್ ಹೈದರ್ ಅವರನ್ನು ವಿಚಾರಿಸಿದಾಗ ವಧು ಅತೀ ಹೆಚ್ಚಾಗಿ ವಾಟ್ಸ್ ಆ್ಯಪ್ ಬಳಕೆ ಮಾಡುತ್ತಿರುವುದಕ್ಕೆ ಮದುವೆ ರದ್ದು ಮಾಡಿರುವುದಾಗಿ ಹೇಳಿದ್ದಾರೆ.
ಘಟನೆ ಕುರಿತಂತೆ ವಧುವಿನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆ ನಡೆಸಿರುವ ಪೊಲೀಸರಿಗೆ ವರನ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ವಧು ಅತೀ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುತ್ತಿದ್ದು, ಮದುವೆಗೂ ಮುನ್ನವೇ ಸಂದೇಶಗಳನ್ನು ರವಾನಿಸುತ್ತಿದ್ದಾಳೆ. ಈ ವರ್ತನೆ ಇಷ್ಟವಾಗದ ಹಿನ್ನಲೆಯಲ್ಲಿ ಮದುವೆ ರದ್ದು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ವರನ ಕುಟುಂಬಸ್ಥರ ಈ ಕಾರಣವನ್ನು ಒಪ್ಪದ ವಧುವಿನ ಕುಟುಂಬಸ್ಥರು ಕೆಲ ಆರೋಪಗಳನ್ನು ಮಾಡಿದ್ದು, ವರದಕ್ಷಿಣೆಗಾಗಿ ಹೀಗೆ ಮಾಡುತ್ತಿದ್ದಾರೆ. ವರನ ಕುಟುಂಬಸ್ಥರು ರೂ.65 ಲಕ್ಷ ವರದಕ್ಷಿಣೆಯ ಬೇಡಿಕೆಯಿಟ್ಟಿದ್ದರು ಎಂದು ಹೇಳಿಕೊಂಡಿದ್ದಾರೆ.