ನವದೆಹಲಿ: ವಿರೋಧ ಪಕ್ಷಗಳ ಒಗ್ಗಟ್ಟು ನಮ್ಮಲ್ಲಿರುವ ಶಕ್ತಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದುರ್ಬಲತೆಯನ್ನು ತೋರಿಸುತ್ತಿದೆ ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಇದನ್ನು ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಭಾರತ್ ಬಂದ್ ಆಚರಿಸಲಾಗುತ್ತಿದ್ದು, ಕಾಂಗ್ರೆಸ್ ಜೊತೆಗೆ ವಿರೋಧ ಪಕ್ಷಗಳು ಕೈಜೋಡಿಸಿವೆ.
ಭಾರತ್ ಬಂದ್ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ಮೀರಾ ಕುಮಾರ್ ಅವರು, ಭಾರತ್ ಬಂದ್ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅವರ ನಾಯಕತ್ವದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರಲಿದೆ. ಇದಲ್ಲದೆ, ಪ್ರತಿಭಟನೆ ಭಾರತದ ಜನತೆಯ ಮೇಲೆಯೂ ಪರಿಣಾಮ ಬೀರಲಿದೆ. ಏಕೆಂದರೆ, ಸರ್ಕಾರದ ಎದುರು ನಾವು ಎದುರಿಸುತ್ತಿರುವ ಪರಿಸ್ಥಿತಿ ಹೇಗಿದೆ ಎಂಬುದು ಅವರಿಗೆ ಅರ್ಥವಾಗಲಿದೆ. ವಿರೋಧ ಪಕ್ಷಗಳ ಒಗ್ಗಟ್ಟು ನಮ್ಮ ಶಕ್ತಿ ಹಾಗೂ ಪ್ರಧಾನಿ ಮೋದಿಯವರ ದುರ್ಬಲತೆಯನ್ನು ತೋರಿಸಲಿದೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಆನಂತ್ ಶರ್ಮಾ ಅವರು, ಸರ್ಕಾರ ವಿರೋಧಿ ಜನರನ್ನು ಅಧಿಕಾರದಿಂದ ಕೆಳಗಿಳಿಸುವುದು ವಿರೋಧ ಪಕ್ಷಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.