ನವದೆಹಲಿ: ಗಡಿಯಲ್ಲಿ ಉಗ್ರರು ವಿನಾಶಕಾರಿ ಚಟುವಟಿಕೆಗಳನ್ನು ನಡೆಸುತ್ತಿದ್ದರೆ, ಭಾರತ ಅದನ್ನು ಎಂದಿಗೂ ಸಹಿಸುವುದಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಅಡಗು ತಾಣಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿಗೆ ಎರಡು ವರ್ಷಗಳಾಗಿರುವ ಹಿನ್ನಲೆಯಲ್ಲಿ ಮಾತನಾಡಿರುವ ಅವರು, ಗಡಿಯಲ್ಲಿ ಉಗ್ರರು ವಿನಾಶಕಾರಿ ಚಟುವಟಿಕೆಗಳನ್ನು ನಡೆಸುತ್ತಿದ್ದರೆ, ಅದನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇವೆ. ಉಗ್ರರ ವಿಧ್ವಂಸಕ ಕೃತ್ಯಗಳನ್ನು ಕೈಕಟ್ಟಿಕೊಂಡು ಕುಳಿತು ನೋಡುವುದಿಲ್ಲ. ಉಗ್ರರಿಗೆ ಬೆಂಬಲ ನೀಡುತ್ತಿರುವವರನ್ನು ಶಿಕ್ಷಿಸಲಾಗುತ್ತದೆ ಎಂದು ಹೇಳಿದ್ದಾರೆ.
ಭಾರತೀಯ ಯೋಧರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ. ಸೀಮಿತ ದಾಳಿ ನಡೆಸಿ 2 ವರ್ಷಗಳಾಗಿದ್ದು, ಇದರ ಆಚರಣೆ ಮಾಡುತ್ತಿದ್ದೇವೆ. ಏಕೆಂದರೆ, ನಮ್ಮ ಭಾರತೀಯ ಯೋಧರ ತ್ಯಾಗ ಹಾಗೂ ಬಲಿದಾನ ಜನರಿಗೆ ತಿಳಿಯಬೇಕು. ಸೀಮಿತ ದಾಳಿ ಮೂಲಕ ಶತ್ರುಗಳಿಗೆ ಹೊಡೆತ ನೀಡಿದ್ದೇವೆಂದು ತಿಳಿಸಿದ್ದಾರೆ.