ರಾಯ್ಪುರ: ಲೋಕಸಭೆ ಚುನಾವಣೆಗೆ ಕೇವಲ ಎರಡು ದಿನ ಬಾಕಿ ಇರುವಾಗಲೇ ಛತ್ತೀಸ್ ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಐಇಡಿ ಸ್ಫೋಟಿಸಿ ಬಿಜೆಪಿ ಶಾಸಕ ಹಾಗೂ ಐವರು ಪೊಲೀಸ್ ಸಿಬ್ಬಂದಿಯನ್ನು ಬಲಿ ಪಡೆದಿದ್ದಾರೆ.
ಛತ್ತೀಸ್ ಗಢದ ನಕ್ಸಲ್ಪೀಡಿತ ದಾಂತೇವಾಡದಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ್ದು, ದಾಳಿಯಲ್ಲಿ ಶಾಸಕ ಭೀಮಾ ಮಾಂಡವಿ ಸೇರಿ ಆರು ಮಂದಿ ಮೃತಪಟ್ಟಿದ್ದಾರೆ.
ನಕ್ಸಲ್ಪೀಡಿತ ಪ್ರದೇಶದಲ್ಲಿ ಬಿಗಿ ಭದ್ರತೆಯೊಂದಿಗೆ ಚುನಾವಣಾ ಪ್ರಚಾರಕ್ಕಾಗಿ ಭೀಮಾ ಮಾಂಡವಿ ತೆರಳುತ್ತಿದ್ದಾಗ, ನಕ್ಸಲರು ಸುಧಾರಿತ ಸ್ಫೋಟಕ ಬಳಸಿ ದಾಳಿ ನಡೆಸಿದ್ದಾರೆ.
ನಕ್ಸಲರು ಸುಧಾರಿತ ಸ್ಫೋಟಕ ಸಿಡಿಸುತ್ತಿದ್ದಂತೆ ಶಾಸಕ ಭೀಮಾ ಮಾಂಡವಿ ಇದ್ದ ಎಸ್ಯುವಿ ವಾಹನ ಗಾಳಿಯಲ್ಲಿ ಮೇಲೆದ್ದು, ತುಂಡು ತುಂಡಾಯಿತು ಎನ್ನಲಾಗಿದೆ.
ಘಟನೆಯಲ್ಲಿ ಶಾಸಕರು ಹಾಗೂ ಅವರ ಬೆಂಗಾವಲು ಪಡೆಯ ಐವರು ಪೊಲೀಸರು ಸ್ಥಳದಲ್ಲೇ ಹುತಾತ್ಮರಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಛತ್ತೀಸ್ಗಢದ ಡಿಜಿಪಿ ಡಿ.ಎಂ. ಆವಸ್ತಿ, ಘಟನೆಯಲ್ಲಿ ಐವರು ಪೊಲೀಸ್ ಸಿಬ್ಬಂದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಇದೆ. ಈಗಲೂ ಅಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ. ಹಾಗಾಗಿ ಸಾವುನೋವಿನ ಬಗ್ಗೆ ಖಚಿತ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.