ಜೈಪುರ: ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ತೆರಳುತ್ತಿದ್ದ ನವವಿವಾಹಿತೆಯನ್ನು ಆಕೆಯ ಗಂಡನ ಕಾರಿನಿಂದಲೇ ದುಷ್ಕರ್ಮಿಗಳು ಅಪಹರಿಸಿರುವ ಘಟನೆ ರಾಜಸ್ತಾನದಲ್ಲಿ ನಡೆದಿದೆ.
ರಾಜಸ್ಥಾನ ಸಿಖರ್ ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಾಗಾ ಗ್ರಾಮದ ಗಿರಿಧಾರಿ ಎಂಬುವವರು ತಮ್ಮ ಇಬ್ಬರು ಪುತ್ರಿಯರಿಗೆ ಮದುವೆ ಮಾಡಿದ್ದಾರೆ. ಮದುವೆ ಮಾರನೆಯ ದಿನ ಅವರನ್ನು ಕಾರಿನಲ್ಲಿ ಅವರ ಗಂಡಂದಿರ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಮಾರ್ಗ ಮಧ್ಯೆ ವಾಹನಗಳಲ್ಲಿ ಬಂದ ದುಷ್ಕರ್ಮಿಗಳು ಅವರ ಕಾರಿನ ಮೇಲೆ ದಾಳಿ ಮಾಡಿದ್ದು, ಆರಂಭದಲ್ಲಿ ಇದನ್ನು ಡಾಕಾಯಿತರ ದಾಳಿ ಎಂದು ಭಾವಿಸಲಾಗಿತ್ತು. ಆದರೆ ಬಳಿಕ ಅವರು ಕಾರಿನ ಗಾಜು ಒಡೆದು ಕಾರಿನೊಳಗೆ ನುಗ್ಗಲು ಯತ್ನಿಸಿದ್ದಾರೆ.
ಈ ವೇಳೆ ಕಾರಿನಲ್ಲಿದ್ದ ನವವಿವಾಹಿತೆಯರನ್ನು ಬೆದರಿಸಿ ಬಲವಂತವಾಗಿ ಕಾರಿನ ಬಾಗಿಲು ತೆಗೆಸಿ ಇಬ್ಬರ ಪೈಕಿ ಓರ್ವ ನವವಿವಾಹಿತ ಯುವತಿಯನ್ನು ಹೊತ್ತೊಯ್ದಿದ್ದಾರೆ. ದಾಳಿಕೋರರ ದಾಳಿಯಿಂದಾಗಿ ಗಾಯಗೊಂಡಿದ್ದ ಆಕೆಯ ಸಹೋದರಿ ಕೂಡಲೇ ತನ್ನ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ.
ಇನ್ನು ವಿಚಾರ ತಿಳಿಯುತ್ತಿದ್ದಂತೆಯೇ ಯುವತಿಯರ ಪೋಷಕರು ಸ್ಥಳೀಯ ಬಿಎಸ್ ಪಿ ಮುಖಂಡ ರಾಜೇಂದ್ರ ಗುದಾ ಅವರ ಮೂಲಕ ಪೊಲೀಸ್ ಠಾಣೆಗೆ ತೆರಳಿ ವಿಷಯ ಮುಟ್ಟಿಸಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ಬಿಎಸ್ ಪಿ ಮುಖಂಡ ರಾಜೇಂದ್ರ ಗುದಾ ವಾಗ್ದಾಳಿ ನಡೆಸಿದ್ದು, ಇದು ರಾಜಕೀಯ ಪ್ರೇರಿತ ಅಪಹರಣವಾಗಿದ್ದು, ನಮ್ಮ ಎದುರಾಳಿ ರಾಜಕೀಯ ಮುಖಂಡರ ಕಾರ್ಯಕರ್ತರೇ ಈ ಕೃತ್ಯ ಮಾಡಿಸಿದ್ದಾರೆ. ಹೀಗಾಗಿ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಯುವತಿ ಸುರಕ್ಷಿತವಾಗಿ ಮನೆಗೆ ವಾಪಸ್ ಬರದಿದ್ದರೆ ಠಾಣೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಕೂಡ ಹಾಕಿದ್ದಾರೆ.
ಇದೇ ವೇಳೆ ಸ್ಛಳೀಯ ಎಸ್ ಪಿ ಅಮರ್ ಪಾಲ್ ಸಿಂಗ್ ಕಪೂರ್ ಅವರ ಕಚೇರಿಗೆ ಸ್ಥಳೀಯರು ಮುತ್ತಿಗೆ ಹಾಕಿದ್ದರು. ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳ ಮಧ್ಯ ಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈವರೆಗೂ ಅಪರಹಣಕ್ಕೊಳಗಾದ ಯುವತಿ ಪತ್ತೆಯಾಗಿಲ್ಲ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಎಸ್ ಪಿ ಶಾಸಕ ರಾಜೇಂದ್ರ ಗುದಾ,. ನಮ್ಮ ಸಮುದಾಯದ ಯುವತಿಯನ್ನು ಅಪಹರಿಸಲಾಗಿದ್ದು, ಆಕೆಯ ಸುರಕ್ಷಿತವಾಗಿ ವಾಪಸ್ ಆಗುವವರೆಗೂ ಇಲ್ಲಿ ಯಾವುದೇ ರೀತಿಯ ಲೋಕಸಭಾ ಚುನಾವಣೆ ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.