ಕೈದಿಗೆ "ಓಂ' ಚಿಹ್ನೆಯ ಬರೆ: ತನಿಖೆಗೆ ದೆಹಲಿ ನ್ಯಾಯಾಲಯ ಆದೇಶ
ನವದೆಹಲಿ: ತಿಹಾರ್ ಜೈಲಿನ ಅಧೀಕ್ಷಕರೊಬ್ಬರು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿಚಾರಣಾಧೀನ ಕೈದಿಯೊಬ್ಬನಿಗೆ “ಓಂ” ಚಿಹ್ನೆಯೊಂದಿಗೆ ಬರೆ ಹಾಕಿದ ಪ್ರಕರಣದ ಬಗ್ಗೆ ದೆಹಲಿ ನ್ಯಾಯಾಲಯವೊಂದು ತನಿಖೆಗೆ ಆದೇಶಿಸಿದೆ.
ಜೈಲಿನ ಡಿಜಿಪಿ ಅವರಿಗೆ ಶುಕ್ರವಾರ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ, 24 ಗಂಟೆಗಳೊಳಗೆ ಈ ಸಂಬಂಧ ವರದಿ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದೆ.
ಏಪ್ರಿಲ್ 12ರಂದು ತಮ್ಮ ಮೇಲೆ ಜೈಲು ಅಧೀಕ್ಷಕ ರಾಜೇಶ್ ಚೌಹಾಣ್, ಜೈಲಿನಲ್ಲಿ ಕ್ರೂರ ಮತ್ತು ಅಮಾನವೀಯವಾಗಿ ಹಿಂಸೆ ನೀಡಿದ್ದಾರೆ ಎಂದು ವಿಚಾರಣಾಧೀನ ಕೈದಿ ತನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಮಾತ್ರವಲ್ಲ ಎರಡು ದಿನಗಳ ಕಾಲ ಊಟ ನೀಡಿಲ್ಲ ಎಂದು ಆತ ಆರೋಪಿಸಿದ್ದಾನೆ.
ವಿಚಾರಣಾಧೀನ ಕೈದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಿಚಾ ಪರಿಹಾರ್, ಇದೊಂದು ಗಂಭೀರ ಪ್ರಕರಣ, ತಕ್ಷಣ ಮಧ್ಯಪ್ರವೇಶಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಅದರಂತೆ ಜೈಲಿನ ಡಿಜಿಪಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿ, ಜೈಲು ಸಂಖ್ಯೆ 4ರಲ್ಲಿನ ಕೈದಿಗೆ ವೈದ್ಯಕೀಯ ತಪಾಸಣೆ ನಡೆಸುವಂತೆ ಸೂಚಿಸಿದರು. ಮಾತ್ರವಲ್ಲ ತಕ್ಷಣ ವರದಿ ನೀಡುವಂತೆಯೂ ಆದೇಶಿಸಿದರು.
ಜೈಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಬೇಕು ಹಾಗೂ ಇತರ ಕೈದಿಗಳ ಹೇಳಿಕೆಗಳನ್ನು ದಾಖಲಿಸಬೇಕು ಎಂದು ನ್ಯಾಯಾಲಯ ಸೂಚಿಸಿತು.
ಜೈಲಿನಲ್ಲಿ ಆರೋಪಿಯ ಸುರಕ್ಷತೆಗೆ ಬಗ್ಗೆ ಖಾತರಿ ನೀಡಬೇಕು. ದೂರುದಾರನ ಸುರಕ್ಷತೆಯ ದೃಷ್ಟಿಯಿಂದ ಜೈಲು ಅಧೀಕ್ಷಕರನ್ನು ತಕ್ಷಣ ಅಲ್ಲಿಂದ ತೆಗೆಯಬೇಕು ಎಂದು ಆದೇಶಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos