ನವದೆಹಲಿ: ಲಿಬಿಯಾ ರಾಜಧಾನಿ ಟ್ರಿಪೊಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಅಲ್ಲಿ ಸಿಲುಕಿ ಹಾಕಿಕೊಂಡಿರುವ 500ಕ್ಕೂ ಹೆಚ್ಚು ಭಾರತೀಯರು ಸುರಕ್ಷತೆ ದೃಷ್ಟಿಯಿಂದ ನಗರವನ್ನು ತಕ್ಷಣವೇ ತೊರೆಯುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕರೆ ನೀಡಿದ್ದಾರೆ.
ಲಿಬಿಯಾ ರಾಜಧಾನಿಯಲ್ಲಿ ಭಾರತೀಯರು ಸಿಲುಕಿ ಹಾಕಿಕೊಂಡಿದ್ದರೆ ಅವರು ತಕ್ಷಣವೇ ನಗರ ತೊರೆದು ಹೊರಬರಲಿ, ನಿಧಾನ ಮಾಡಿದರೆ ನಂತರ ನಮಗೆ ಅವರನ್ನು ಸ್ಥಳಾಂತರ ಮಾಡಲು ಸಾಧ್ಯವಾಗದಿರಬಹುದು ಎಂದು ಟ್ವೀಟ್ ಮಾಡಿದ್ದಾರೆ.
ವಿಶ್ವಸಂಸ್ಥೆ ಬೆಂಬಲಿತ ಪ್ರಧಾನ ಮಂತ್ರಿ ಫಯೇಝ್ ಅಲ್ ಸರ್ರಜ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಲಿಬಿಯಾದ ಮಿಲಿಟರಿ ಕಮಾಂಡರ್ ಖಲಿಫಾ ಹಫ್ತರ್ ಅವರ ಪಡೆ ದಾಳಿ ನಡೆಸಲು ಆರಂಭಿಸಿದ ನಂತರ ಕಳೆದ ಎರಡು ವಾರಗಳಲ್ಲಿ ಟ್ರಿಪೊಲಿಯಲ್ಲಿ ನಡೆದ ದಾಳಿಯಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಅಲ್ಲಿನ ಪರಿಸ್ಥಿತಿ ಸದ್ಯ ಬಿಗುವಿನಿಂದ ಕೂಡಿದೆ.