ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ವಿಶೇಷ ತ್ರಿ ಸದಸ್ಯ ಪೀಠ ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವಂತೆ ತನಿಖಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
ಈ ಸಂಬಂಧ ಪ್ರಮುಖ ತನಿಖಾ ಸಂಸ್ಥೆಗಳಾದ ಸಿಬಿಐ, ಐಟಿ, ದೆಹಲಿ ಪೊಲೀಸ್ ಮುಖ್ಯಸ್ಥರಿಗೆ ತ್ರಿಸದಸ್ಯ ಪೀಠ ಸಮನ್ಸ್ ಜಾರಿ ಮಾಡಿದ್ದು, ಇದು ವಿಚಾರಣೆ ಅಲ್ಲ. ಸಿಬಿಐ, ಐಬಿ ಮತ್ತು ದೆಹಲಿ ಪೊಲೀಸ್ ಮುಖ್ಯಸ್ಥರು ನಾವು ಸಭೆ ನಡೆಸಬೇಕಿದೆ. ಹೀಗಾಗಿ ಇಂದು ನ್ಯಾಯಮೂರ್ತಿಗಳ ಚೆಂಬರ್ನಲ್ಲಿ ಮಧ್ಯಾಹ್ನ 12.30ಕ್ಕೆ ಬಂದು ಭೇಟಿಯಾಗಬೇಕು. ಮತ್ತು ಕೋರ್ಟ್ ವಿಚಾರಣೆ ಮಧ್ಯಾಹ್ನ 3 ಗಂಟೆಯಿಂದ ಮತ್ತೆ ಆರಂಭವಾಗಲಿದೆ ಎಂದು ಕೋರ್ಟ್ ಹೇಳಿದೆ.
ಇದು ಪಿತೂರಿ ಎಂದ ಸಿಜೆಐ ಪರ ವಕೀಲ ಉತ್ಸವ್ ಬೈನ್ಸ್
ಇದೇ ವೇಳೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯ್ ಅವರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪಿತೂರಿ ಎಂದು ಸಿಜೆಐ ಪರ ವಕೀಲ ಉತ್ಸವ್ ಬೈನ್ಸ್ ಅವರು ಇಂದು ಮುಚ್ಚಿದ ಲಕೋಟೆಯಲ್ಲಿ ತ್ರಿಸದಸ್ಯ ಪೀಠದ ಮುಂದೆ ಸಾಕ್ಷ್ಯವನ್ನು ಸಲ್ಲಿಕೆ ಮಾಡಿದ್ದರು. ನ್ಯಾ.ಅರುಣ್ ಮಿಶ್ರಾ, ಆರ್.ಎಫ್.ನಾರಿಮನ್ ಮತ್ತು ದೀಪಕ್ ಗುಪ್ತಾ ಅವರಿದ್ದ ನ್ಯಾಯಪೀಠ ಇಂದು ಈ ಸಂಬಂಧ ಸಿಬಿಐ ಮುಖ್ಯಸ್ಥ, ಇಂಟಲಿಜೆನ್ಸ್ ಬ್ಯುರೋ ಹಾಗೂ ದೆಹಲಿ ಪೊಲೀಸ್ ಮುಖ್ಯಸ್ಥರಿಗೆ ಸಮನ್ಸ್ ನೀಡಿದೆ. ಅಂತೆಯೇ ಸಿಜೆಐ ಪರ ವಕಲೀರು ಸಲ್ಲಿಕೆ ಮಾಡಿರುವ ಈ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವಂತೆ ಆದೇಶ ನೀಡಿದ್ದಾರೆ.