ಕೋಲ್ಕತ್ತಾ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿವರ್ಷ ಕುರ್ತಾ,ಸಿಹಿತಿಂಡಿಯನ್ನು ನನಗೆ ಉಡುಗೊರೆಯನ್ನಾಗಿ ಕಳಿಸುತ್ತಾರೆ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊಂದಿಗೆ ನಡೆದ ರಾಜಕಿಯೇತರ ಸಂದರ್ಶನದ ವೇಳೆ ನೀಡಿದ್ದ ಹೇಳಿಕೆಗೆ ಮಮತಾ ಬ್ಯಾನರ್ಜಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ನಾವು ಅತಿಥಿಗಳನ್ನು ರಸಗುಲ್ಲಾ, ಉಡುಗೊರೆ ಕೊಟ್ಟು ಸ್ವಾಗತಿಸುತ್ತೇವೆ, ಆದರೆ ಒಂದೇ ಒಂದು ಮತ ಬಿಜೆಪಿಗೆ ನೀಡುವುದಿಲ್ಲ ಎಂದು ಪ್ರಧಾನಿಯವರ ಹೆಸರು ಉಲ್ಲೇಖಿಸದೆ ಹೇಳಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಅತಿಥಿಗಳನ್ನು ವಿಶೇಷ ಉಡುಗೊರೆ ಕೊಟ್ಟು ಸ್ವಾಗತಿಸುವುದು ಬಂಗಾಳೀಯರ ಸಂಸ್ಕೃತಿ. ಆದರೆ ಬಿಜೆಪಿಗೆ ನಾವು ಮತ ಹಾಕುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಹೂಗ್ಲಿ ಜಿಲ್ಲೆಯ ಸೇರಾಂಪುರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, ವಿಶೇಷ ಸಂದರ್ಭಗಳಲ್ಲಿ, ಹಬ್ಬಗಳಲ್ಲಿ ಅತಿಥಿಗಳಿಗೆ ಶುಭಾಶಯ ಹೇಳುವುದು, ಉಡುಗೊರೆ ನೀಡುವುದು ಪಶ್ಚಿಮಬಂಗಾಳದ ಸಂಸ್ಕೃತಿ ಎಂದಿದ್ದಾರೆ.
ನಾನು ಈ ಮಾತು ಹೇಳಿದರೆ ಜನರಿಗೆ ಆಶ್ಚರ್ಯವಾಗಬಹುದು, ಚುನಾವಣೆಯ ಈ ಸಂದರ್ಭದಲ್ಲಿ ಹೀಗೆ ಹೇಳಬಾರದು, ಆದರೆ ಮಮತಾ ದೀದಿ ಪ್ರತಿವರ್ಷ ನನಗೆ ಗಿಫ್ಟ್ ಕಳುಹಿಸುತ್ತಾರೆ. ಮಮತಾ ದೀದಿ ಅವರೇ ಆಯ್ಕೆ ಮಾಡಿದ ಒಂದೊ, ಎರಡೊ ಕುರ್ತಾವನ್ನು ಪ್ರತಿವರ್ಷ ಕಳುಹಿಸುತ್ತಾರೆ. ಬಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಕೂಡ ಪ್ರತಿವರ್ಷ ಸ್ವೀಟ್ ಕಳುಹಿಸುತ್ತಾರೆ, ಅವರನ್ನು ನೋಡಿ ಮಮತಾ ದೀದಿ ಕಳುಹಿಸುತ್ತಾರೆ ಎಂದು ಪ್ರಧಾನಿ ಹೇಳಿದ್ದರು.