ಹೈದರಾಬಾದ್: ಐಐಟಿಗಳಿಗೆ ಪ್ರವೇಶ ಕಲ್ಪಿಸುವ 2019ನೇ ಸಾಲಿನ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಐಐಟಿ ಆಕಾಂಕ್ಷಿಯಾಗಿದ್ದ 21 ವರ್ಷದ ಯುವಕ ತನ್ನ ತಂದೆ ಪಿಸ್ತೂಲ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ, ನೆರೆಡ್ಮೆಟ್ ನಿವಾಸಿ, ಮಾಜಿ ಸೈನಿಕ ಮೆಹೆರುದ್ದಿನ್ ಅವರ ಪುತ್ರ ಶಹಿಲ್ ಎಂದು ಗುರುತಿಸಲಾಗಿದ್ದು, ಖಾಸಗಿ ಬ್ಯಾಂಕ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ತನ್ನ ತಂದೆಯ ಪಿಸ್ತೂಲಿನಿಂದ ಶೂಟ್ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ನರಸಿಂಹಸ್ವಾಮಿ ಅವರು ತಿಳಿಸಿದ್ದಾರೆ.
ಇತ್ತೀಚಿಗಷ್ಟೇ ಸಿಬಿಎಸ್ ಇ 12ನೇ ತರಗತಿ ಪರೀಕ್ಷೆ ಬರೆದಿದ್ದ ಶಹಿಲ್ ಜೆಇಇ ಪರೀಕ್ಷೆ ಸಹ ಬರೆದಿದ್ದ. ಜೆಇಇ ಮುಖ್ಯ ಪರೀಕ್ಷಾ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ದುರಾದೃಷ್ಟವಶಾತ್ ಶಹಿಲ್ ಫೇಲ್ ಆಗಿದ್ದಾರೆ. ಇದರಿಂದ ನೊಂದ ಶಾಹಿಲ್ ನಿನ್ನೆ ರಾತ್ರಿ ಎಲ್ಲರು ಮಲಗಿದ ನಂತರ ತನ್ನ ರೂಮ್ ನಲ್ಲಿ ತಂದೆ ಪಿಸ್ತೂಲ್ ನಿಂದ ಶೂಟ್ ಮಾಡಿಕೊಂಡಿದ್ದಾರೆ ಎಂದು ಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.