ನವದೆಹಲಿ: ಮಾಲ್ದೀವ್ಸ್ನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣ ಸಂಬಂಧ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಉಪಾಧ್ಯಕ್ಷ ಅಹಮದ್ ಅದೀಬ್ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದು ತೂತುಕುಡಿಯಲ್ಲಿ ಆತನನ್ನು ಬಂಧಿಸಲಾಗಿದೆ.
ಮಾಲ್ಡೀವ್ಸ್ ನಲ್ಲಿ ತನಗೆ ಜೀವ ಬೆದರಿಕೆ ಇದೆ ಹೇಳಿ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿ ಆಶ್ರಯ ಅರಸಿ ಬಂದಿದ್ದ ಅಹ್ಮದ್ ಅದೀಬ್ ನನ್ನು ಸದ್ಯ ಬಂಧಿಸಲಾಗಿದ್ದು ಗುಪ್ತಚರ ಮತ್ತು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಜುಲೈ 11ರಂದು ವಿರ್ಗೋ ಎಂಬ ದೋಣಿ ಮಾಲ್ಡೀವ್ಸ್ ಗೆ ಸರಕುಗಳನ್ನು ತೆಗೆದುಕೊಂಡು ಹೋಗಿತ್ತು. ನಂತರ ಅಲ್ಲಿಂದ ಜುಲೈ 28ರಂದು ಮರಳುವಾಗ ಅಹ್ಮದ್ ಅದೀಬ್ ತನಗೆ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಹೇಳಿ ಹಡಗಿನಲ್ಲಿ ಪ್ರಯಾಣ ಬೆಳೆಸಿದ್ದ. ಈ ಹಡಗಿನಲ್ಲಿ ಎಂಟು ಮಂದಿ ಇಂಡೋನೇಷಿಯನ್ನರು ಮತ್ತು ಒಬ್ಬರು ಭಾರತೀಯ ಸೇರಿ ಒಂಬತ್ತು ಹಡಗಿನ ಸಿಬ್ಬಂದಿ ಇದ್ದರು.
ಗುರುವಾರ ತೂತುಕುಡಿ ಹಳೆಯ ಬಂದರಿಗೆ ದೋಣಿ ತಲುಪಿದ್ದು ಈ ವೇಳೆ ಸಿಬ್ಬಂದಿ ಬಂದರು ಅಧಿಕಾರಿಗಳಿಗೆ ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಅಹ್ಮದ್ ತಮ್ಮ ದೋಣಿಯಲ್ಲಿ ಪ್ರಯಾಣ ಬೆಳೆಸಿರುವುದಾಗಿ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಂದರು ಅಧಿಕಾರಿಗಳು ಅದೀಬ್ ನನ್ನು ಬಂಧಿಸಿದ್ದರು.