ದೇಶ

ಸಂಧಾನ ಸಮಿತಿ ಯತ್ನ ವಿಫಲ, ಆ.6 ರಿಂದ ನಿತ್ಯ ಅಯೋಧ್ಯೆ ಪ್ರಕರಣದ ವಿಚಾರಣೆ: ಸುಪ್ರೀಂ

Lingaraj Badiger
ನವದೆಹಲಿ: ಮಾತುಕತೆ ಮೂಲಕ ಅಯೋಧ್ಯೆ ರಾಮ ಮಂದಿರ- ಬಾಬರಿ ಮಸೀದಿ ಭೂ ವಿವಾದ ಇತ್ಯರ್ಥಪಡಿಸುವಲ್ಲಿ ಸಂಧಾನ ಸಮಿತಿ ವಿಫಲವಾಗಿದ್ದು, ಆಗಸ್ಟ್ 6 ರಿಂದ ನಿತ್ಯವೂ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ಧರಿಸಿದೆ.
ಕೋರ್ಟ್ ನೇಮಕ  ಮಾಡಿದ್ದ ಸಂಧಾನ ಸಮಿತಿಯ ಸಂಧಾನ ಪ್ರಕ್ರಿಯೆಯಲ್ಲಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಮಾನಕ್ಕೆ  ಬಂದಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ  ಐವರು ನ್ಯಾಯಾಧೀಶರ ಸಂವಿಧಾನ ಪೀಠ, ಇದೆ 6 ರಿಂದ ಆದ್ಯತೆ ಮೇಲೆ ವಿಚಾರಣೆ ಪ್ರಾರಂಭಿಸುವುದಾಗಿ ತಿಳಿಸಿದೆ.
ಸಂಧಾನ ಸಮಿತಿಯ ಪ್ರಗತಿ ವರದಿಗೆ ಸಂಬಂಧಿಸಿದಂತೆ ಗುರುವಾರ ಮೂರು ಸದಸ್ಯರ ಸಂಧಾನ ಸಮಿತಿ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಈ ಪ್ರಕರಣವು ಅಯೋಧ್ಯೆ ಬಾಬರಿ ಮಸೀದಿಯ  ಮೂಲ ಭೂ ಮಾಲೀಕತ್ವದ ವಿಷಯದ ಮೊಕದ್ದಮೆಗೆ ಸಂಬಂಧಿಸಿದೆ. ಸುಪ್ರೀಂ ಕೋರ್ಟ್ ಸಂಧಾನ ಸಮಿತಿ ಈ ವಿಷಯದಲ್ಲಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ.
ಐದು ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ ಎಸ್‌ಎ ಬಾಬ್ಡೆ , ಅಶೋಕ್ ಭೂಷಣ್, ಎಸ್‌ಎ ನಜೀರ್ ಮತ್ತು ಡಿವೈ ಚಂದ್ರಚೂಡ್ ಇತರೆ ನ್ಯಾಯಮೂರ್ತಿಗಳಾಗಿದ್ದಾರೆ.  
ಮೂವರು ಸದಸ್ಯರ ಸಂಧಾನ ಸಮಿತಿಯ ನೇತೃತ್ವವನ್ನುನಿವೃತ್ತ ನ್ಯಾಯಮೂರ್ತಿ ಎಫ್‌ಎಂಐ ಖಲಿಫುಲ್ಲಾ ಮತ್ತು ಬೆಂಗಳೂರು ಮೂಲದ ಆಧ್ಯಾತ್ಮಿಕ ಗುರು ರವಿಶಂಕರ್ ಹಾಗೂ ಹಿರಿಯ ವಕೀಲ ಶ್ರೀರಾಮ್ ಪಂಚು ವಹಿಸಿದ್ದರು.
1992ರಲ್ಲಿ ಬಾಬರಿ ಮಸೀದಿ ಧ್ವಂಸ
ಅಯೋಧ್ಯೆಯಲ್ಲಿ 16ನೇ ಶತಮಾನದಲ್ಲಿ ನಿರ್ಮಾಣವಾಗಿದ್ದ ಬಾಬರಿ ಮಸೀದಿಯನ್ನು 1992ರಲ್ಲಿ ಹಿಂದೂ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಅದಕ್ಕೆ ಕಾರಣ ಅಯೋಧ್ಯೆ ಭಗವಾನ್ ರಾಮಜನ್ಮಭೂಮಿಯಾಗಿದೆ. ಈ ಪುರಾತನ ದೇವಾಲಯದ ಸ್ಥಳದಲ್ಲಿ ಬಾಬರಿ ಮಸೀದಿ ಕಟ್ಟಿದ್ದಾರೆಂಬುದು ಹಿಂದೂಗಳ ನಂಬಿಕೆಯಾಗಿತ್ತು. ಬಾಬರಿ ಮಸೀದಿ ಧ್ವಂಸ ಪ್ರಕರಣ ದೇಶಾದ್ಯಂತ ಕೋಮುಗಲಭೆಗೆ ಕಾರಣವಾಗಿ, ಅಂದಾಜು 2000 ಜನರು ಸಾವನ್ನಪ್ಪಿದ್ದರು.
SCROLL FOR NEXT