ದೇಶ

ಮಧ್ಯ ಪ್ರದೇಶಕ್ಕೆ ಬಂದು ಸೆಟ್ಲ್ ಆಗಿ: ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಕುಟುಂಬಕ್ಕೆ ಸಿಎಂ ಕಮಲ್ ನಾಥ್ ಮನವಿ

Lingaraj Badiger
ಭೋಪಾಲ್: ಉತ್ತರ ಪ್ರದೇಶದ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ಕುಟುಂಬಕ್ಕೆ ಸಹಾಯ ಹಸ್ತ ಚಾಚಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು, ಕುಟುಂಬ ಸಮೇತ ತಮ್ಮ ರಾಜ್ಯಕ್ಕೆ ಬಂದು ನೆಲೆಸುವಂತೆ ಸಂತ್ರಸ್ತೆಯ ತಾಯಿಗೆ ಕೇಳಿಕೊಂಡಿದ್ದಾರೆ.
ಉನ್ನಾವ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಅನ್ನು ನಾನು ಸ್ವಾಗತಿಸುತ್ತೇನೆ. ಸಂತ್ರಸ್ತೆಯ ತಾಯಿ ಉತ್ತರ ಪ್ರದೇಶ ತನಗೆ ಸುರಕ್ಷಿತವಲ್ಲ. ಹೀಗಾಗಿ ರಾಜ್ಯ ತೊರೆಯಲು ನಿರ್ಧರಿಸಿರುವುದಾಗಿ ಹೇಳಿದ್ದು, ಅವರು ತಮ್ಮ ಮಗಳು ಹಾಗೂ ಇತರೆ ಕುಟುಂಬದ ಸದಸ್ಯರೊಂದಿಗೆ ಮಧ್ಯ ಪ್ರದೇಶಕ್ಕೆ ಬಂದು ನೆಲೆಸುವಂತೆ ಕೇಳಿಕೊಳ್ಳುತ್ತಿದ್ದೇನೆ. ಅವರ ಕುಟುಂಬಕ್ಕೆ ನಮ್ಮ ಸರ್ಕಾರ ಸೂಕ್ತ ಭದ್ರತೆ ನೀಡಲಿದೆ ಎಂದು ಕಮಲ್ ನಾಥ್ ಅವರು ಟ್ವೀಟ್ ಮಾಡಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅತ್ಯಾಚಾರ ಸಂತ್ರಸ್ತೆಗೆ ನಾವು ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಆಕೆಗೆ ಶಿಕ್ಷಣ ಸೇರಿದಂತೆ ಇತರೆ ಎಲ್ಲಾ ಜವಾಬ್ದಾರಿಗಳನ್ನು ನಾವು ವಹಿಸಿಕೊಳ್ಳುತ್ತೇವೆ. ಆಕೆಯನ್ನು ಈ ರಾಜ್ಯದ ಮಗಳಂತೆ ನೋಡಿಕೊಳ್ಳಲಾಗುವುದು ಎಂದು ಉತ್ತರ ಪ್ರದೇಶದ ಕಾನ್ಪುರ್ ದಲ್ಲಿ ಜನಿಸಿರುವ ಕಮಲ್ ನಾಥ್ ಅವರು ಹೇಳಿದ್ದಾರೆ.
ಮಧ್ಯ ಪ್ರದೇಶ ಸಿಎಂ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ಬಿಜೆಪಿಯ ವಕ್ತಾರ ರಜನೀಶ್ ಅಗರವಾಲ್ ಅವರು, ಅತ್ಯಂತ ಸೂಕ್ಷ್ಮ ವಿಚಾರಗಳಲ್ಲೂ ಸಿಎಂ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
ಕಮಲ್ ನಾಥ್ ಅವರಿಗೆ ಈ ಪ್ರಕರಣದ ಅತ್ಯಂತ ಕಾಳಜಿ ಇದ್ದರೆ, ಅದೇ ಕಾಳಜಿಯನ್ನು ರಾಜ್ಯದ ಬಾಲಕೀಯರ ವಿಚಾರದಲ್ಲೂ ತೋರಿಸಲಿ. ಮಧ್ಯ ಪ್ರದೇಶದಲ್ಲಿ ಬಾಲಕೀಯರನ್ನು ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡುವ ಪ್ರಕರಣಗಳು ವರದಿಯಾಗುತ್ತಿವೆ. ಈ ಬಗ್ಗೆ ಸಿಎಂ ಮತ್ತು ರಾಜ್ಯ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದ್ದಾರೆ.
SCROLL FOR NEXT