ನವದೆಹಲಿ: ಕೇಂದ್ರ ಸರ್ಕಾರ ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಹೆಚ್ಚುವರಿ ಸೇನಾ ಸಿಬ್ಬಂದಿಗಳನ್ನು ನಿಯೋಜನೆ ಮಾಡುತ್ತಿದೆ. ಇದು ಹತ್ತಿರ ಹತ್ತಿರ 38,000 ಸಂಖ್ಯೆಯನ್ನು ದಾಟಿದೆ.
ಮತ್ತೊಮ್ಮೆ ಅಧಿಕಾರಕ್ಕೆ ಬಂದಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿರುವ ಆರ್ಟಿಕಲ್ 370 ಹಾಗೂ 35ಎ ಯನ್ನು ರದ್ದುಗೊಳಿಸುವುದಾಗಿ ಬಿಜೆಪಿ 2019 ರ ಲೋಕಸಭಾ ಚುನಾವಣೆ ವೇಳೆ ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಈಗಿನ ಬೆಳವಣಿಗೆ ಸ್ಥಳೀಯ ಜನತೆ ಹಾಗೂ ರಾಜಕಾರಣಿಗಳಲ್ಲಿ ಆತಂಕ ಮೂಡಿಸಿದೆ. ಈ ನಡುವೆ ಕಾಶ್ಮೀರದಲ್ಲಿ ಹೆಚ್ಚುವರಿ ಸೇನೆ ನಿಯೋಜನೆ ಮಾಡುತ್ತಿರುವುದಕ್ಕೆ ಬೇರೆಯದ್ದೇ ಕಾರಣವಿದೆ ಎಂಬ ವಿಶ್ಲೇಷಣೆಯೂ ಮಾಡಲಾಗುತ್ತಿದೆ.
ಈ ವರೆಗೂ ನಡೆದುಬಂದ ಸಿದ್ಧ ಸೂತ್ರಗಳು ಅಥವಾ ಸಂಪ್ರದಾಯಗಳನ್ನು ಬದಿಗೆ ಸರಿಸಿ ಹೊಸ ಸಂಪ್ರದಾಯಗಳನ್ನು ರೂಪಿಸುವುದಕ್ಕೇ ಖ್ಯಾತಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ಬಾರಿ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸದೇ ಕಾಶ್ಮೀರದಲ್ಲಿ ಪ್ರಧಾನಿ ಮೋದಿ ತ್ರಿವರ್ಣ ಧ್ವಜಾರೋಹಣ ಮಾಡಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತ ಅಖಂಡ ಕಾಶ್ಮೀರ ತನ್ನದೆಂದು ಪ್ರತಿಪಾದಿಸುತ್ತಿದ್ದು, ಪ್ರತ್ಯೇಕತಾವಾದದ ಧ್ವನಿ ಪ್ರಬಲವಾಗಿರುವ ಕಾಶ್ಮೀರದಲ್ಲಿ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜಾರೋಹಣ ಮಾಡಿದರೆ ವಿರೋಧಿಗಳಿಗೆ ಪ್ರತ್ಯೇಕತಾವಾದಿಗಳಿಗೆ ಬಲವಾದ ಸಂದೇಶ ರವಾನೆಯಾಗಲಿದೆ.