ನವದೆಹಲಿ: 71 ವರ್ಷಗಳ ಅಸಹಾಯಕ ಸ್ಥಿತಿಯ ಬದುಕಿಗೆ ಕೊನೆಗೂ 370ನೇ ವಿಧಿಯನ್ನು ಕಿತ್ತು ಹಾಕಲಾಗಿದೆ. ಲಡಾಖ್ ಜನರು ಇಂದು ಮನಬಿಚ್ಚಿ ಮಾತನಾಡುವಂತಾಗಿದೆ ಎಂದು ಲಡಾಖ್ ನ ಬಿಜೆಪಿ ಸಂಸದ ಜಮ್ಯಂಗ್ ತ್ಸೆರಿಂಗ್ ನಮ್ಗ್ಯಾಲ್ ಸಂಸತ್ ನಲ್ಲಿ ಆಡಿದ ಒಂದೊಂದು ಮಾತು ಕೇಳುಗರ ಮನಮುಟ್ಟುವಂತಿತ್ತು.
ಸಂಸತ್ ನಲ್ಲಿ ತಮ್ಮ ಭಾಷಣದ ಮೂಲಕ ಜಮ್ಯಂಗ್ ಕಾಂಗ್ರೆಸ್, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಕಳೆದ 7 ದಶಕಗಳಿಂದ ಲಡಾಖ್ ಜನತೆ ಕೇಂದ್ರಾಡಳಿತಕ್ಕಾಗಿ ಹೋರಾಟ ಮಾಡುತ್ತಲೇ ಇದ್ದರು. ಅದೀಗ ಸಿಕ್ಕಿದೆ. 370ನೇ ವಿಧಿ ಕಿತ್ತು ಹಾಕಿದ್ದರಿಂದ ಕೇವಲ ಎರಡು ಪರಿವಾರದ ಜೀವನ ನಿರ್ವಹಣೆಗೆ ತೊಂದರೆಯಾಗಿದೆಯಷ್ಟೇ ಎಂದರು.
ಲಡಾಖ್ ಇವತ್ತು ಅಭಿವೃದ್ಧಿ ವಂಚಿತವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಮತ್ತು 370ನೇ ವಿಧಿ ಕಾರಣ ಎಂದು ಟೀಕಿಸಿದರು. ಯುಪಿಎ ಸರ್ಕಾರ 2011ರಲ್ಲಿ ಕಾಶ್ಮೀರಕ್ಕೆ ಕೇಂದ್ರೀಯ ವಿಶ್ವವಿದ್ಯಾಲಯ ನೀಡಿತು. ಹೋರಾಟ ಮಾಡಿ ಜಮ್ಮು ಕೂಡ ವಿವಿ ಪಡೆಯಿತು. ನಾವು ಹೋರಾಟ ಮಾಡುತ್ತಲೇ ಇದ್ದರೂ ಸಿಗಲಿಲ್ಲ. ಇದೀಗ ಪ್ರಧಾನಿ ನಮಗೂ ಒಂದು ವಿವಿ ನೀಡಿದ್ದಾರೆ ಎಂದು ಜಮ್ಯಂಗ್ ಮೋದಿಯನ್ನು ಮೆಚ್ಚಿಕೊಂಡಿದ್ದಾರೆ.
ಇನ್ನು ಜಮ್ಯಂಗ್ ಭಾಷಣದ ವೇಳೆ ಸಂಸತ್ ನಲ್ಲಿ ಪ್ರಧಾನಿ ಮೋದಿ ಅವರು ಇಲ್ಲದಿದ್ದರೂ, ಈ ವಿಷಯ ತಿಳಿದ ಕೂಡಲೇ ಮೋದಿ ಅವರು ಈ ಯುವ ನಾಯಕನನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಲಡಾಖ್ ಜನತೆಯ ಆಶೋತ್ತರಗಳನ್ನು ಜಮ್ಯಂಗ್ ಪ್ರತಿನಿಧಿಸಿದ್ದಾರೆ. ಇದು ನೀವು ಕೇಳಲೇಬೇಕಾದ ಭಾಷಣ ಎಂದು ಹೊಗಳಿದ್ದಾರೆ.