ನವದೆಹಲಿ: ಭಾರತ ಇದುವರೆಗೆ ಕಂಡಿದ್ದ ಅದ್ಭುತ ವಿದೇಶಾಂಗ ಸಚಿವೆ (ಮಾಜಿ), ನೆಚ್ಚಿನ ರಾಜಕಾರಣಿ ಸುಷ್ಮ ಸ್ವರಾಜ್ ನಿಧನಕ್ಕೆ ಕಂಬನಿ ಮಿಡಿಯುತ್ತಿದೆ.
ಅತಿ ಕಿರಿಯ ವಯಸ್ಸಿನಲ್ಲಿ ರಾಜಕಾರಣ ಪ್ರವೇಶಿಸಿದ್ದ ಸುಷ್ಮಾ ಸ್ವರಾಜ್ ಹಲವು ಪ್ರಥಮಗಳ ರಾಜಕಾರಣಿಯಾಗಿದ್ದರು. ಅತಿ ಕಿರಿಯ ವಯಸ್ಸಿನಲ್ಲಿ ಹರ್ಯಾಣ ಸರ್ಕಾರದ ಕ್ಯಾಬಿನೆಟ್ ಸಚಿವರಾಗಿ, ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ, ಒಂದು ರಾಷ್ಟ್ರೀಯ ಪಕ್ಷದ ಮೊದಲ ಮಹಿಳಾ ವಕ್ತಾರರಾಗಿ.... ಹೀಗೆ ಸುಷ್ಮಾ ಸ್ವರಾಜ್ ನಾಂದಿ ಹಾಡಿದ್ದ ಹಲವು ಪ್ರಥಮಗಳ ಪಟ್ಟಿ ದೊಡ್ಡದಿದೆ.
ಅದ್ಭುತ ವಾಗ್ಮಿಯೂ ಆಗಿದ್ದ ಸುಷ್ಮಾ ಸ್ವರಾಜ್, ಪಕ್ಷದ ತತ್ವ-ಸಿದ್ಧಾಂತಕ್ಕಾಗಿ ಸದಾ ಬದ್ಧರಾಗಿರುತ್ತಿದ್ದರು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದಕ್ಕೆ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದ ಸುಷ್ಮಾ ಸ್ವರಾಜ್ ಟ್ವೀಟ್ ಸಾವಿನ ಕೊನೆಯ ಕ್ಷಣಗಳಲ್ಲಿಯೂ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿಯೇ ಎನ್ನುವಂತಿತ್ತು.
ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಂತೂ ಸುಷ್ಮಾ ಸ್ವರಾಜ್ ಅನಿವಾಸಿ ಭಾರತೀಯರ ಪಾಲಿಗೆ ದೇವರಾಗಿದ್ದರೆಂದರೂ ತಪ್ಪಾಗುವುದಿಲ್ಲ. ವಿದೇಶಾಂಗ ಇಲಾಖೆಯಲ್ಲಿ ಸಿದ್ಧ ಸೂತ್ರಗಳನ್ನು ಮೀರಿ ಮಹತ್ವದ ಬದಲಾವಣೆ ತಂದಿದ್ದರು ಸುಷ್ಮಾ ಸ್ವರಾಜ್. ಪಾಸ್ಪೋರ್ಟ್ ಮೂಲಸೌಕರ್ಯ ವಿಸ್ತರಣೆ, ಪೂರ್ವ ದೇಶಗಳೊಂದಿಗೆ ಬಾಂಧವ್ಯ ಬೆಸುಗೆ, ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ, ಸಮಸ್ಯೆಗಳಿಗೆ ಸ್ಪಂದಿಸುವ ಮೇಲ್ಪಂಕ್ತಿ ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವರಾಗಿದ್ದ ಅವಧಿಯ ಗಮನ ಸೆಳೆಯುವಂತಹ ಕೆಲಸಗಳು.
ಅಡ್ವಾಣಿಯ ಶಿಷ್ಯರಾಗಿದ್ದ ಸುಷ್ಮಾ ಸ್ವರಾಜ್ 2009-14 ರ ಅವಧಿಯಲ್ಲಿ ಲೋಕಸಭೆಯ ವಿಪಕ್ಷ ನಾಯಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಇಂದಿರಾ ಗಾಂಧಿ ನಂತರ ವಿದೇಶಾಂಗ ಇಲಾಖೆಯನ್ನು ನಿರ್ವಹಿಸಿದ್ದು, ಭಾರತದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ವಿದೇಶಾಂಗ ಸಚಿವೆ ಎಂಬ ಖ್ಯಾತಿಗೆ ಸುಷ್ಮಾ ಸ್ವರಾಜ್ ಭಾಜನರಾಗಿದ್ದಾರೆ.