ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಕಾಶ್ಮೀರಿಗಳೊಂದಿಗೆ ಸಂವಾದ ನಡೆಸುತ್ತಿರುವ ವಿಡಿಯೋ ದೃಶ್ಯಾವಳಿಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ “ ಹಣದಿಂದ ಏನೂ ಬೇಕಾದರೂ ಖರೀದಿಸಬಹುದು” ಎಂಬ ಹೇಳಿಕೆಯನ್ನು ಬಿಜೆಪಿ ಉಗ್ರವಾಗಿ ಖಂಡಿಸಿದೆ.
ಗುಲಾಂ ನಬಿ ಅಜಾದ್ ಅವರ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇಂತಹ ಹೇಳಿಕೆ ಸಾಮಾನ್ಯವಾಗಿ ಪಾಕಿಸ್ತಾನದಿಂದ ಬರಬೇಕಿತ್ತು. ಆಜಾದ್ ಅವರ ಹೇಳಿಕೆಯನ್ನು ಪಾಕಿಸ್ತಾನ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯಿದ್ದು, ಕೂಡಲೇ ಆಜಾದ್ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ವಕ್ತಾರ ಸೈಯದ್ ಷಹನವಾಜ್ ಹುಸೇನ್ ದೆಹಲಿಯಲ್ಲಿ ಒತ್ತಾಯಿಸಿದ್ದಾರೆ
ಬಿಜೆಪಿಯ ಇತರ ನಾಯಕರಾದ ರಾಮ ಮಾಧವ್ ಹಾಗೂ ಅಮಿತ್ ಮಾಳವೀಯ ಕೂಡಾ ಆಜಾದ್ ಅವರ ಹೇಳಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂವಿಧಾನ ವಿಧಿ 370 ರದ್ಧತಿ ವಿರೋಧಿಸುತ್ತಿರುವ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ 1980 ರಲ್ಲಿ ಮಹಾರಾಷ್ಟ್ರದ ವಾಸಿಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಎಂಬುದು ಗೊತ್ತೆ? ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
ಇದೇ ರೀತಿ ಮತ್ತೊಬ್ಬ ಕಾಶ್ಮೀರಿ ರಾಜಕಾರಣಿ, ದಿವಂಗತ ಮುಫ್ತಿ ಮೊಹಮದ್ ಸಯೀದ್ 1986ರಲ್ಲಿ ಬಿಹಾರ್ ಕತಿಹಾರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.. ಇಲ್ಲಿನ ವ್ಯಂಗ್ಯವನ್ನು ಪ್ರತಿಯೊಬ್ಬರೂ ಆರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಹಣ ಎಲ್ಲಾ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತದೆ ಎಂಬ ಕಾಂಗ್ರೆಸ್ ನಾಯಕ ಆಜಾದ್ ಹೇಳುವುದಾದರೆ, ವಿಧಿ 370 ರದ್ದತಿಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರನ್ನು ಹಣ ದಿಂದ ಖರೀದಿಸಲಾಗಿದೆಯೇ ..? ಎಂದು ಬಿಜೆಪಿ ನಾಯಕ ರಾಂ ಮಾಧವ್ ಪ್ರಶ್ನಿಸಿದ್ದಾರೆ.
ಸಂಸತ್ ಅಧಿವೇಶನ ಮುಗಿದ ನಂತರ ವಾಡಿಕೆಯಂತೆ ಕಾಶ್ಮೀರ ಕಣಿವೆಗೆ ಭೇಟಿ ನೀಡಲಿದ್ದೇನೆ ಎಂದು ಆಜಾದ್ ಹೇಳಿದ್ದಾರೆ. ಅಜಿತ್ ದೋವಾಲ್ ವಿಡಿಯೋ ಕುರಿತ ಮಾಧ್ಯಮಗಳ ಪ್ರಶ್ನೆಗೆ, “ಹಣ ಕೊಟ್ಟರೆ ಯಾರ ಬೆಂಬಲ ಬೇಕಾದರೂ ಪಡೆಯಬಹುದು” ಎಂದು ಆಜಾದ್ ಉತ್ತರಿಸಿದ್ದರು.
ದೇಶದಲ್ಲಿ ಒಳ್ಳೆಯ ಕೆಲಸಗಳು ನೆಡೆದಾಗಲೆಲ್ಲಾ ಪಾಕಿಸ್ತಾನ ಹಾಗೂ ಕಾಂಗ್ರೆಸ್ ಪಕ್ಷ ಒಂದೇ ಭಾಷೆಯಲ್ಲಿ ಮಾತನಾಡುತ್ತವೆ. ಕಾಂಗ್ರೆಸ್ ದಾರಿಗೆ ಪಾಕಿಸ್ತಾನ ಬರುತ್ತದೆ, ಇಲ್ಲವೇ, ಪಾಕಿಸ್ತಾನದ ದಾರಿಗೆ ಕಾಂಗ್ರೆಸ್ ಹೋಗುತ್ತದೆ. ಆಜಾದ್ ಹೇಳಿಕೆಯ ಮೂಲಕ ಇದು ಮತ್ತೊಮ್ಮೆ ರುಜುವಾತಾಗಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಕೂಡಲೇ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.