ದೇಶ

ಕರಾವಳಿ ರಕ್ಷಣಾಪಡೆಯ ಸಹಾಯಕ ನೌಕೆಯಲ್ಲಿ ಬೆಂಕಿ ಅವಘಡ: ಓರ್ವ ಸಿಬ್ಬಂದಿ ಸಾವು, 28 ಮಂದಿಯ ರಕ್ಷಣೆ

Srinivasamurthy VN

ವಿಶಾಖಪಟ್ಟಣ: ಆಂಧ್ರ ಪ್ರದೇಶದ ವಿಶಾಖಪಟ್ಟಣದ ಹೊರವಲಯ ಬಂದರು ತೀರದಲ್ಲಿದ್ದ ಭಾರತೀಯ ನೌಕಾಪಡೆಯ ಸಹಾಯಕ ನೌಕೆಯಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಅನಾಹುತ ಸಂಭವಿಸಿದ್ದು, ನೌಕೆಯಲ್ಲಿದ್ದ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಈ ನೌಕೆಯಲ್ಲಿ 29 ಸಿಬ್ಬಂದಿಗಳು ಇದ್ದರು ಎಂದು ಕರಾವಳಿ ರಕ್ಷಣಾಪಡೆಯ ಮೂಲಗಳು ತಿಳಿಸಿವೆ. ಇದರಲ್ಲಿ  ಓರ್ವ ಸಾವಿಗೀಡಾಗಿದ್ದು, 28 ಮಂದಿ ಪಾರಾಗಿದ್ದಾರೆ. ಅಂತೆಯೇ 15 ಮಂದಿಗೆ ಗಾಯಗಳಾಗಿದ್ದು,  8 ಮಂದಿಗೆ ಸಾಮಾನ್ಯ ಗಾಯಗಳಾಗಿವೆ. ಗಂಭೀರ ಗಾಯಗೊಂಡಿರುವ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಸೋಮವಾರ ಬೆಳಗ್ಗೆ 11.30ಕ್ಕೆ ಸಹಾಯಕ ನೌಕೆ ಕೋಸ್ಟಲ್ ಜಾಗ್ವಾರ್‌ ನಲ್ಲಿ ಸ್ಫೋಟದ ಸದ್ದು ಕೇಳಿದೆ. ಇದಾದ ಕೆಲವೇ ನಿಮಿಷಗಳಲ್ಲಿ ದಟ್ಟವಾದ ಕಪ್ಪು ಹೊಗೆ ಇಡೀ ನೌಕೆಯನ್ನು ಆವರಿಸಿದ್ದು, ತಕ್ಷಣವೇ ಅದರಲ್ಲಿದ್ದ ಸಿಬ್ಬಂದಿಗಳು ನೀರಿಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಅವಘಡ ಸಂಭವಿಸಲು ಕಾರಣ ಏನು ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ.

SCROLL FOR NEXT