ನವದೆಹಲಿ: ಹೊತ್ತಿ ಉರಿಯುತ್ತಿದ್ದ ಏಮ್ಸ್ ಆಸ್ಪತ್ರೆ ಕಟ್ಟಡದಲ್ಲಿ, ಆತಂಕ, ಗೊಂದಲಗಳ ನಡುವೆಯೇ ಹೆರಿಗೆ ಮಾಡಿಸಿ ವೈದ್ಯರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಒಂದೆಡೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿತ್ತು, ಮತ್ತೊಂದೆಡೆ ಎಲ್ಲರೂ ರೋಗಿಗಳನ್ನು ಸ್ಥಳಾಂತರಿಸುವುದರಲ್ಲಿ ವ್ಯಸ್ತರಾಗಿದ್ದರು. ಈ ನಡುವೆಯೇ 30 ವರ್ಷದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರು ಆಕೆಯನ್ನು ಡಾ.ರಾಜೇಂದ್ರ ಪ್ರಸಾದ್ ನೇತ್ರ ವಿಜ್ಞಾನ ವಿಭಾಗಕ್ಕೆ ಸ್ಥಳಾಂತರಿಸಿ ವೈದ್ಯರು ಹೆರಿಗೆ ಮಾಡಿಸಿದ್ದಾರೆ.
"ಆಸ್ಪತ್ರೆಗೆ ದಾಖಲಾಗಿರುವವರ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯ, ಯಾವುದೇ ಪರಿಸ್ಥಿತಿಯಲ್ಲೂ ಅದನ್ನು ನಿರ್ಲಕ್ಷ್ಯ ಮಾಡುವುದಕ್ಕೆ ಸಾಧ್ಯವಿಲ್ಲ. ಬೆಂಕಿ ಹೊತ್ತಿ ಉರಿಯುತ್ತಿದ್ದ ಸಂದರ್ಭದಲ್ಲೂ ನಮಗೆ ತಾಯಿ ಮಗುವಿನ ಜೀವ ಮುಖ್ಯವಾಗಿತ್ತು, ತಕ್ಷಣವೇ ಮಹಿಳೆಯನ್ನು ಕರೆದೊಯ್ದು ಹೆರಿಗೆ ಮಾಡಲಾಯಿತು" ಎಂದು ಹಿರಿಯ ವೈದ್ಯರು ಹೇಳಿದ್ದಾರೆ.
ಆ.17 ರಂದು ಏಮ್ಸ್ ನ ಪಿ.ಸಿ ಬ್ಲಾಕ್ ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕಟ್ಟಡದ ಮೊದಲ ಮೂರು ಮಹಡಿಗಳಿಗೆ ಹೆಚ್ಚು ಹಾನಿ ಸಂಭವಿಸಿದೆ. 6 ಗಂಟೆಗಳ ಕಾರ್ಯಾಚರಣೆ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು.