ದೇಶ

ಜಮ್ಮು ವಿಮಾನ ನಿಲ್ದಾಣದಲ್ಲಿ ಗುಲಾಮ್​ ನಬಿ ಆಜಾದ್​ರನ್ನು ತಡೆದು ವಾಪಸ್ ದೆಹಲಿಗೆ​ ಕಳುಹಿಸಿದ ಸರ್ಕಾರ

Lingaraj Badiger

ಜಮ್ಮು: ಹಿರಿಯ ಕಾಂಗ್ರೆಸ್​ ನಾಯಕ ಗುಲಾಮ್​ ನಬಿ ಆಜಾದ್​ ಅವರನ್ನು ಜಮ್ಮು ವಿಮಾನ ನಿಲ್ದಾಣದಲ್ಲಿ ತಡೆದು ವಾಪಸ್​ ದೆಹಲಿಗೆ ಕಳುಹಿಸಲಾಗಿದೆ. ಈ ಮೂಲಕ ಮಾಜಿ ಮುಖ್ಯಮಂತ್ರಿಗೆ ಜಮ್ಮು ಮತ್ತು ಕಾಶ್ಮೀರ ಭೇಟಿಗೆ ಎರಡನೇ ಬಾರಿ ನಿರಾಕರಿಸಲಾಗಿದೆ.

ಗುಲಾಮ್​ ನಬಿ ಆಜಾದ್​ ಅವರು ಇಂದು ಮಧ್ಯಾಹ್ನ 2.45ರ ಸುಮಾರಿಗೆ ಜಮ್ಮು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಅವರನ್ನು ವಿಮಾನ ನಿಲ್ದಾಣದಿಂದ ಹೊರಗೆ ಬರಲು ಬಿಡಲಿಲ್ಲ. ಒತ್ತಾಯಪೂರ್ವಕವಾಗಿ ಅವರನ್ನು ದೆಹಲಿಗೆ ವಾಪಸ್​ ಕಳುಹಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್​ ವಕ್ತಾರ ರವಿಂದರ್​ ಶರ್ಮಾರ ತಿಳಿಸಿದ್ದಾರೆ.

ಈ ಮೊದಲು ಆಗಷ್ಟ್ 8 ರಂದು ಗುಲಾಮ್​ ನಬಿ ಆಜಾದ್​ ಅವರನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ತಡೆದು ವಾಪಸ್​ ಕಳುಹಿಸಲಾಗಿತ್ತು.

ಕಳೆದ 2 ವಾರಗಳಿಂದ ಗುಲಾಮ್​ ನಬಿ ಆಜಾದ್ ಅವರನ್ನು ಕಣಿವೆ ರಾಜ್ಯದಲ್ಲಿರುವ ಅವರ ಮನೆಗೆ ತೆರಳಲೂ ಅವಕಾಶ ನೀಡುತ್ತಿಲ್ಲ. ಪಕ್ಷದ ಕಚೇರಿಗೆ ಭೇಟಿ ನೀಡಲು ಅವಕಾಶ ನಿರಾಕರಿಸಲಾಗಿದೆ. ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪ್ರಸ್ತುತ ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಹಾಗಾಗಿ ಅವರು ಜನರನ್ನು ಭೇಟಿ ಮಾಡಿ ಅವರ ಅಭಿಪ್ರಾಯ ಸಂಗ್ರಹಿಸಲು ಇಚ್ಛಿಸುತ್ತಿದ್ದಾರೆ. ಆದರೆ ಅವರಿಗೆ ರಾಜ್ಯಕ್ಕೆ ಬರಲು ಅವಕಾಶ ನೀಡುತ್ತಿಲ್ಲ ಎಂದು ಶರ್ಮಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಕಣಿವೆ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಹಲವು ನಿರ್ಬಂಧಗಳನ್ನು ಹೇರಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಕಾಶ್ಮೀರ ಭೇಟಿಗೆ ಅವಕಾಶ ನೀಡುತ್ತಿಲ್ಲ.

SCROLL FOR NEXT