ದೇಶ

ಕಾಶ್ಮೀರದಲ್ಲಿ ಸಂಪರ್ಕ ಸೇವೆಗಳಿಗೆ ನಿರ್ಬಂಧ; ನಾಗರಿಕರಿಗೆ ಸಿಗುತ್ತಿಲ್ಲ ಆಪ್ತರ ಸಾವಿನ ಸುದ್ದಿ!

Sumana Upadhyaya

ಶ್ರೀನಗರ: ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ನಂತರ ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ವಿಧಿಸಲಾಗಿದ್ದ ಮಾಹಿತಿ, ಸಂವಹನ ನಿರ್ಬಂಧವನ್ನು ಸಡಿಲಗೊಳಿಸಲಾಗುತ್ತಿದ್ದು ಸ್ಥಿರ ದೂರವಾಣಿ ಸೇವೆಗಳನ್ನು ಬಹುತೇಕ ಭಾಗಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. 


ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಮಾಹಿತಿ, ಪ್ರಸಾರ, ಮೊಬೈಲ್ ಇತ್ಯಾದಿಗಳ ಸೇವೆಗೆ ಕಳೆದ ತಿಂಗಳು 25ರಂದು ತಡೆಹಿಡಿದಿತ್ತು. ಇಂದಿಗೆ ಒಂದು ತಿಂಗಳು ಕಳೆದಿದೆ. ಆದರೆ ಇನ್ನೂ ಕೆಲವು ಕಡೆಗಳಲ್ಲಿ ಜನರಿಗೆ ಸಂಪರ್ಕ ವ್ಯವಸ್ಥೆಯೇ ಇಲ್ಲದಾಗಿದೆ. ಮಾನವ ಜೀವನಕ್ಕೇ ಸಂಕಷ್ಟ ಸ್ಥಿತಿ ಬಂದೊದಗಿದೆ.


ಕಳೆದ ಆಗಸ್ಟ್ 17ರಂದು ಶ್ರೀನಗರದ ಸೆಕಿದಫರ್ ಪ್ರದೇಶದ ಬ್ರರಿಪೊರದಲ್ಲಿ 60 ವರ್ಷದ ಮೊಹಮ್ಮದ್ ಅಯೊಬ್ ಖಾನ್ ಎಂಬ ವ್ಯಕ್ತಿ ಅಶ್ರುವಾಯು ಸೇವಿಸಿ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಅವರ ಸೋದರ ಶಬೀರ್ ಅಹ್ಮದ್ ಖಾನ್ ಹೇಳುವ ಪ್ರಕಾರ ಮೊಹಮ್ಮದ್ ಖಾನ್ ಸತ್ತು ಹೋಗಿ ಮೂರು ದಿನಗಳು ಕಳೆದ ನಂತರ ಅವರ ಸೋದರಿಯರಿಗೆ ಮೃತಪಟ್ಟ ವಿಚಾರ ಗೊತ್ತಾಗಿದೆ.
ಇಂತಹ ನೂರಾರು ಕೇಸುಗಳು ಜಮ್ಮು-ಕಾಶ್ಮೀರದಲ್ಲಿ ಆಗುತ್ತಿವೆ. ದಾಲ್ ಗೇಟ್ ಪ್ರದೇಶದ ಸುಹೈಲ್ ಅಹ್ಮದ್ ಎಂಬ ವ್ಯಕ್ತಿ, ನನ್ನ ಮಾವ ತೀರಿ ಹೋಗಿ ನಾಲ್ಕು ದಿನಗಳ ನಂತರ ನಮಗೆ ವಿಷಯ ಗೊತ್ತಾಯಿತು, ಅವರ ಅಂತಿಮ ಕ್ರಿಯಾ ವಿಧಾನದಲ್ಲಿ ಭಾಗವಹಿಸಲಾಗಲಿಲ್ಲ ಎಂಬ ದುಃಖ ಕಾಡುತ್ತಿದೆ ಎಂದರು.


ನನ್ನ ಸೋದರ ಸಂಬಂಧಿ ರಿಯಾಜ್ ಅಹ್ಮದ್ ಪುಲ್ವಾಮಾದಲ್ಲಿ ಆರೋಗ್ಯವಿಲ್ಲವೆಂದು ಗೊತ್ತಾಗಿತ್ತು. ಅಲ್ಲಿ ನಿಷೇಧವಿದ್ದ ಸಂದರ್ಭದಲ್ಲಿ ಅವರು ತೀರಿಕೊಂಡರು. ಅವರ ಕುಟುಂಬದವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಅಧಿಕಾರಿಗಳು ನಿಷೇಧ ಹೇರಿದ್ದರಿಂದ ನಮಗೆ ಅವರ ಅಂತಿಮ ಕ್ರಿಯಾವಿಧಾನಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ ಎಂದರು.


ಮತ್ತೊಂದು ಹೃದಯ ವಿದ್ರಾವಕ ಘಟನೆಯಲ್ಲಿ ಶ್ರೀನಗರದ ವ್ಯಕ್ತಿ ಹಜ್ ಯಾತ್ರೆ ವೇಳೆ ಅಸುನೀಗಿದ್ದ ತನ್ನ ತಾಯಿಯ ಮೃತದೇಹವನ್ನು ನೋಡಲು ಮಗನಿಗೆ ಸಾಧ್ಯವಾಗಿರಲಿಲ್ಲ. ಆಕೆಯನ್ನು ಜೊತೆಗೆ ಹೋದವರು ಸೌದಿ ಅರೇಬಿಯಾದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು.
ಈ ಸಮಸ್ಯೆಗಳ ನಡುವೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಸ್ಥಿರ ದೂರವಾಣಿ ಸಂಪೂರ್ಣವಾಗಿ ಮರು ಸಂಪರ್ಕಿಸುವ ಕಾರ್ಯ ನಡೆಯುತ್ತಿದೆ. ಇ-ಕಾಮರ್ಸ್ ವಲಯಗಳಾದ ಲಾಲ್ ಚೌಕ್ ಮೂಲಕ ಟೆಲಿಫೋನ್ ಸಂಪರ್ಕ ಮರು ಸಂಪರ್ಕಿಸುವ ಕೆಲಸ ನಡೆಯುತ್ತಿದೆ ಎಂದರು. 


ಜಮ್ಮು-ಕಾಶ್ಮೀರದ ಹಲವು ಭಾಗಗಳಲ್ಲಿ ಇನ್ನೂ ಮೊಬೈಲ್ ಟೆಲಿಫೋನ್ ಸೇವೆ ಮತ್ತು ಇಂಟರ್ನೆಟ್, ಬಿಎಸ್ ಎನ್ ಎಲ್ ಬ್ರಾಡ್ ಬ್ಯಾಂಡ್ ಮತ್ತು ಖಾಸಗಿ ಇಂಟರ್ನೆಟ್ ಸಂಸ್ಥೆಗಳ ಸೇವೆಗಳು ಸಿಗುತ್ತಿಲ್ಲ.

SCROLL FOR NEXT