ದೇಶ

ಉತ್ತರ ಪ್ರದೇಶ : ರಸ್ತೆ ಅಪಘಾತದಲ್ಲಿ 16 ಮಂದಿ ದುರ್ಮರಣ, ಅನೇಕ ಮಂದಿಗೆ ಗಾಯ 

Nagaraja AB

ಶಹಜಾನ್ಪುರ್ :  ಅತಿವೇಗದಿಂದ ಚಲಿಸುತ್ತಿದ್ದ ಟ್ರಕ್ ವೊಂದು  ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿದ್ದ  ಎರಡು ಟೆಂಪೊಗಳ ಮೇಲೆ ಉರುಳಿದ ಕಾರಣ ಕನಿಷ್ಟ 16 ಮಂದಿ ಮೃತಪಟ್ಟು, ಇತರ ಮೂವರು ಗಾಯಗೊಂಡಿರುವ ದುರ್ಘಟನೆ ಇಲ್ಲಿನ ರಾಷ್ಟ್ರೀಯ  ಹೆದ್ದಾರಿ ಸಂಖ್ಯೆ 24ರಲ್ಲಿ ಇಂದು  ಸಂಭವಿಸಿದೆ.
        
ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಈ ಘಟನೆ ನಡೆದಿದೆ.  ಅತಿವೇಗದಿಂದ ಚಲಿಸುತ್ತಿದ್ದ ಟ್ರಕ್  ಪ್ರಯಾಣಿಕರು ತುಂಬಿದ್ದ  ಎರಡು ಟೆಂಪೂಗಳ ಮೇಲೆ ಉರುಳಿ   ಬಿದ್ದು ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಸೇರಿದ್ದು, ಉಳಿದವರೆಲ್ಲರೂ ಪುರುಷರಾಗಿದ್ದಾರೆ.
  
ಗಾಯಗೊಂಡಿರುವರ ಪೈಕಿ  ಓರ್ವನ  ಸ್ಥಿತಿ  ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಮೃತಪಟ್ಟವರ  ಗುರುತನ್ನು ಇನ್ನೂ ಪತ್ತೆಹಚ್ಚಬೇಕಾಗಿದೆ.ಅಪಘಾತಕ್ಕೆ ಕಾರಣನಾದ ಟ್ರಕ್ ಚಾಲಕನನ್ನು  ಪೊಲೀಸರು  ಬಂಧಿಸಿದ್ದಾರೆ.ಅಪಘಾತದಿಂದಾಗಿ  ಹೆದ್ದಾರಿಯಲ್ಲಿ  ವಾಹನಗಳ ಸಂಚಾರ ಸ್ಥಗಿತಗೊಂಡು,   ಮೈಲಿಗಟ್ಟಲೆ ವಾಹನಗಳು ನಿಂತಿರುವ ದೃಶ್ಯ ಕಂಡು ಬಂದಿದೆ. 

ಈ ನಡುವೆ,  ಉತ್ತರ ಪ್ರದೇಶ ಮುಖ್ಯಮಂತ್ರಿ  ಯೋಗಿ ಅದಿತ್ಯನಾಥ್,  16 ಮಂದಿ ಸಾವಿಗೆ ಕಾರಣವಾದ ಭೀಕರ ರಸ್ತೆ ಅಪಘಾತಕ್ಕೆ ತೀವ್ರ  ನೋವು ವ್ಯಕ್ತಪಡಿಸಿದ್ದು, ಗಾಯಗೊಂಡವರಿಗೆ  ಸಾಧ್ಯವಿರುವ ಎಲ್ಲ ವೈದ್ಯಕೀಯ ಚಿಕಿತ್ಸೆ ಹಾಗೂ ಮೃತಪಟ್ಟವರ ಕುಟುಂಬಗಳಿಗೆ  ತಕ್ಷಣ ಪರಿಹಾರ ಕಲ್ಪಿಸುವಂತೆ   ಜಿಲ್ಲಾಧಿಕಾರಿಗಳಿಗೆ  ಆದೇಶಿಸಿದ್ದಾರೆ

SCROLL FOR NEXT