ನವದೆಹಲಿ: ಪಾಕಿಸ್ತಾನದ ಪ್ರಚೋದನೆಯಿಂದ ಕಾಶ್ಮೀರದಲ್ಲಿ ಹಿಂಸಾಚಾರ ನಡೆದಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರವಿದೆ. ಈ ಹಿಂಸಾಚಾರ ಪಾಕಿಸ್ತಾನದ ಪ್ರಚೋದನೆಯಿಂದ ಆದದ್ದು ಎಂದು ಆರೋಪಿಸಿದ್ದಾರೆ.
ಹಲವು ವಿಷಯಗಳಲ್ಲಿ ಈ ಸರ್ಕಾರದ ಬಗ್ಗೆ ಭಿನ್ನಾಭಿಪ್ರಾಯವಿದೆ. ಆದರೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಸ್ಪಷ್ಟಪಡಿಸುತ್ತೇನೆ, ಕಾಶ್ಮೀರ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಪಾಕಿಸ್ತಾನ ಅಥವಾ ಬೇರೆ ಯಾವ ದೇಶಕ್ಕೂ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್ ಗೆ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದು, ಇದೇ ನಿಲುವನ್ನು ಕಾಂಗ್ರೆಸ್ ಲಗಾಯ್ತಿನಿಂದಲೂ ಕಾಯ್ದುಕೊಂಡಿದೆ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಆರ್ಟಿಕಲ್ 370 ರದ್ದುಗೊಳಿಸಿದ ರೀತಿಯನ್ನಷ್ಟೇ ನಾವು ವಿರೋಧಿಸಿದ್ದು, ನಮ್ಮ ನಿಲುವಿನಿಂದ ಪಾಕಿಸ್ತಾನ ಲಾಭ ಪಡೆಯುವುದಕ್ಕೆ ಕಾರಣವೇ ಇಲ್ಲ ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರ ವಿಚಾರದಲ್ಲಿ ಭಾರತ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ವಿಶ್ವಸಂಸ್ಥೆಗೆ ಪಾಕಿಸ್ತಾನ ಸರ್ಕಾರ ಅರ್ಜಿ ಸಲ್ಲಿಸಿದೆ ಎಂದು ನಾವು ಕೇಳಿದ್ದೇವೆ. ಅದರಲ್ಲಿ ಪಾಕಿಸ್ತಾನ ಬೇಕೆಂದೇ ರಾಹುಲ್ ಗಾಂಧಿಯವರ ಹೆಸರನ್ನು ತಂದಿದೆ, ಈ ಮೂಲಕ ಪಾಕಿಸ್ತಾನ ಉದ್ದೇಶಪೂರ್ವಕವಾಗಿ ಸುಳ್ಳುಸುದ್ದಿಯನ್ನು ಹಬ್ಬಿಸುತ್ತಿದೆ ಎಂದರು.
ಈ ಹಿಂದೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಮೋದಿ ಸರ್ಕಾರ ಸಂವಿಧಾನ ವಿಧಿ 370ನ್ನು ರದ್ದುಪಡಿಸಿರುವುದನ್ನು ತೀವ್ರವಾಗಿ ವಿರೋಧಿಸಿದ್ದರು.