ದೇಶ

ದೇಶ, ಈಶಾನ್ಯ ರಾಜ್ಯಗಳ ಹಿತಾಸಕ್ತಿಗಾಗಿ ಪೌರತ್ವ ಮಸೂದೆ ಮಂಡನೆ: ಪ್ರಹ್ಲಾದ್ ಜೋಷಿ

Manjula VN

ನವದೆಹಲಿ: ರಾಷ್ಟ್ರ ಹಾಗೂ ಈಶಾನ್ಯ ರಾಜ್ಯಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪೌರತ್ವ ಮಸೂದೆಯನ್ನು ಮಂಡನೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯವರು ಸೋಮವಾರ ಹೇಳಿದ್ದಾರೆ. 

ನೆರೆ ದೇಶಗಳಲ್ಲಿನ ಧಾರ್ಮಿಕ ಕಿರುಕುಳಗಳಿಗೆ ಹೆದರಿ, ಅಲ್ಲಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತಕರರಿಗೆ ಭಾರತೀಯ ಪೌರತ್ವ ನೀಡುವ ಮಹತ್ವದ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಲಿದೆ. 60 ವರ್ಷದಷ್ಟು ಹಳೆಯದಾದ ಈ ಮಸೂದೆಯ ತಿದ್ದುಪಡಿಗೆ ಇಂದು ಮಧ್ಯಾಹ್ನ ಗೃಹ ಸಚಿವ ಅಮಿತ್ ಶಾ ಅವರು ಮಸೂದೆ ಮಂಡಿಸಲಿದ್ದಾರೆ. ನಂತರ ಈ ಮಸೂದೆ ಕುರಿತು ಉಭಯ ಸದನಗಳಲ್ಲಿ ಚರ್ಚೆ ನಡೆಯಲಿದೆ. 

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಹ್ಲಾದ್ ಜೋಷಿಯವರು, ಮಸೂದೆಯು ದೇಶ ಹಾಗೂ ಈಶಾನ್ಯ ರಾಜ್ಯಗಳ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿದೆ. ಮಸೂದೆ ಎರಡೂ ಸದನದಗಳಿಂದ ಒಪ್ಪಿಗೆ ಪಡೆದುಕೊಳ್ಳಲಿದೆ. ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಸೂದೆಯನ್ನು ಮಂಡಿಸಲಾಗುತ್ತದೆ ಎಂದು ಹೇಳಿದ್ದಾರೆ. 

SCROLL FOR NEXT