ದೇಶ

ಪೌರತ್ವ ತಿದ್ದುಪಡಿ ಮಸೂದೆ: ಇಂದು  ಮಧ್ಯಾಹ್ನ 12 ಗಂಟೆಗೆ ಅಮಿತ್ ಶಾರಿಂದ ರಾಜ್ಯಸಭೆಯಲ್ಲಿ ಮಂಡನೆ 

Sumana Upadhyaya

ನವದೆಹಲಿ: ಲೋಕಸಭೆಯಲ್ಲಿ ಅನುಮೋದನೆಗೊಂಡಿರುವ ನಾಗರಿಕ ತಿದ್ದುಪಡಿ ಮಸೂದೆ 2019 ಬುಧವಾರ ಮಧ್ಯಾಹ್ನ 12 ಗಂಟೆಗೆ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. 


ಗೃಹ ಸಚಿವ ಅಮಿತ್ ಶಾ ಇಂದು ಮಧ್ಯಾಹ್ನ ರಾಜ್ಯಸಭೆಯಲ್ಲಿ ವಿಧೇಯಕವನ್ನು ಸದಸ್ಯರ ಒಪ್ಪಿಗೆಗೆ ಮಂಡಿಸಲಿದ್ದಾರೆ. 
ಧಾರ್ಮಿಕ ಮತ್ತು ಮತೀಯ ಕಿರುಕುಳದಿಂದ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಓಡಿಬಂದು ಭಾರತದಲ್ಲಿ ಆಶ್ರಯ ಪಡೆದುಕೊಂಡಿರುವ ಹಿಂದೂ, ಕ್ರೈಸ್ತ,ಸಿಖ್, ಬೌದ್ಧ ಮತ್ತು ಜೊರಾಸ್ಟ್ರಿಯನ್ ಧರ್ಮೀಯರಿಗೆ ಭಾರತದ ನಾಗರಿಕತ್ವ ನೀಡುವ ಮಸೂದೆ ಇದಾಗಿದೆ. 


ಇದಕ್ಕೆ ಕಳೆದ ಸೋಮವಾರ ಲೋಕಸಭೆಯಲ್ಲಿ ಬಹುಮತ ಸಿಕ್ಕಿದೆ.ಸತತ 7 ಗಂಟೆಗಳ ಕಾಲ ಲೋಕಸಭೆಯಲ್ಲಿ ನಿರಂತರವಾಗಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾದ, ವಾಗ್ವಾದಗಳು ನಡೆದವು. ಕೊನೆಗೆ 311 ಮಂದಿ ಲೋಕಸಭಾ ಸದಸ್ಯರು ವಿಧೇಯಕದ ಪರವಾಗಿ ಮತ್ತು 80 ಮಂದಿ ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು.


ಇಂದು ರಾಜ್ಯಸಭೆಯಲ್ಲಿ ವಿಧೇಯಕ ಅಂಗೀಕಾರವಾಗಬೇಕಾದರೆ ಕೇಂದ್ರ ಸರ್ಕಾರಕ್ಕೆ 123 ಸಂಸದರ ಬೆಂಬಲ ಸಿಗಬೇಕು. ಇಲ್ಲಿನ ಸದಸ್ಯರ ಒಟ್ಟು ಸಂಖ್ಯೆ 245 ಆಗಿದೆ.


ಈ ಮಧ್ಯೆ ಇಂದಿನ ರಾಜ್ಯಸಭಾ ಕಲಾಪದಲ್ಲಿ ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸಲಾಗಿದೆ. 

SCROLL FOR NEXT