ದೇಶ

'ಮೋದಿಯವರಿದ್ದರೆ ಎಲ್ಲವೂ ಸಾಧ್ಯ' ಬಿಜೆಪಿ ಘೋಷಣೆಯನ್ನು ಅಣಕಿಸಿದ ಪ್ರಿಯಾಂಕಾ ಗಾಂಧಿ 

Sumana Upadhyaya

ನವದೆಹಲಿ: ಭಾರತೀಯ ಜನತಾ ಪಾರ್ಟಿಯ ಚುನಾವಣಾ ಪ್ರಚಾರದ ಘೋಷಣೆಯಾದ ಮೋದಿ ಹೈ ತೊ ಮಮ್ಕಿನ್ ಹೈ, ಬಿಜೆಪಿ ಹೆ ತೊ ಮಮ್ಕಿನ್ ಹೈ(ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲವೂ ಸಾಧ್ಯ) ನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅಣಕಿಸಿದ್ದಾರೆ.


ಹೌದು ಬಿಜೆಪಿ ಅಧಿಕಾರದಲ್ಲಿದ್ದರೆ, ಮೋದಿಯವರು ಪ್ರಧಾನಿಯಾದರೆ ಎಲ್ಲವೂ ಸಾಧ್ಯವಾಗುತ್ತದೆ, ಈರುಳ್ಳಿ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಉದ್ಯೋಗ ಕಳೆದುಕೊಳ್ಳುವುದು, ಆರ್ಥಿಕ ಹಿಂಜರಿತ ಹೀಗೆ ಎಲ್ಲವೂ ಸಾಧ್ಯವಾಗುತ್ತದೆ ಎಂದು ಬಿಜೆಪಿಯ ಚುನಾವಣಾ ಘೋಷಣೆಯನ್ನು ಲೇವಡಿ ಮಾಡಿದರು.


ಇದಕ್ಕೆ ವೇದಿಕೆಯಾದದ್ದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ಇಂದು ನಡೆದ ಭಾರತ್ ಬಚಾವೊ ರ್ಯಾಲಿ.  ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರನ್ನು ವಿಭಜಿಸುವ ಮತ್ತು ಅಡ್ಡಿಪಡಿಸುವ ಯೋಜನೆಗಳನ್ನು ಹೊಂದಿದೆ ಎಂದು ಆರೋಪಿಸಿ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಭಾರತ್ ಬಚಾವೋ ರ್ಯಾಲಿಯನ್ನು ಏರ್ಪಡಿಸಿತ್ತು.
ದೇಶದಲ್ಲಿ ಆರ್ಥಿಕ ಹಿಂಜರಿತ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಈಶಾನ್ಯ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ತೀವ್ರ ಪ್ರತಿಭಟನೆ ಬಗ್ಗೆ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕರು ಉಲ್ಲೇಖಿಸಿದರು.


ರ್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಮೋದಿ ಆಡಳಿತದ ಆರು ವರ್ಷಗಳಲ್ಲಿ ದೇಶದ ಆರ್ಥಿಕತೆ ಹದಗೆಟ್ಟಿದೆ. ಮೋದಿಯವರಿದ್ದಲ್ಲಿ ನಿರುದ್ಯೋಗ ಸಮಸ್ಯೆಯಿರುತ್ತದೆ. ಇಡೀ ವಿಶ್ವವೇ ನಮ್ಮ ದೇಶದತ್ತ ತಿರುಗಿ ನೋಡುವಂತೆ ಆರ್ಥಿಕತೆಯಲ್ಲಿ ಪ್ರಗತಿಯಾಗಿತ್ತು. ಆದರೆ ಕಳೆದ 6 ವರ್ಷಗಳಲ್ಲಿ ದೇಶದ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ, ಅನೇಕ ಕೈಗಾರಿಕೆಗಳು ಬಾಗಿಲು ಹಾಕಿವೆ, ಇವೆಲ್ಲಾ ಮೋದಿ ಸರ್ಕಾರದ ಆಡಳಿತ ವೈಫಲ್ಯಗಳಿಂದ ಎಂದರು.


ಅಸಂವಿಧಾನಿಕವಾದಂತಹ ಕಾನೂನುಗಳನ್ನು ಮೋದಿ ಸರ್ಕಾರ ಅನುಮೋದನೆ ಮಾಡುತ್ತಿದೆ. ಇತ್ತೀಚಿನ ಪೌರತ್ವ ತಿದ್ದುಪಡಿ ಮಸೂದೆಯಿಂದ ಈಶಾನ್ಯ ಮತ್ತು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದರು.


ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಮೃತ ಶರೀರವನ್ನು ನೋಡಿದಾಗ ತಮ್ಮ ತಂದೆ ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರು ಮೃತಪಟ್ಟಾಗ ಅವರ ಮೃತದೇಹ ನೋಡಿದ್ದು ನೆನಪಿಗೆ ಬಂತು ಎಂದು ಬೇಸರ ತೋಡಿಕೊಂಡರು.

SCROLL FOR NEXT