ದೇಶ

ತೆಲಂಗಾಣ ಎನ್‌ಕೌಂಟರ್‌: ನಾಲ್ವರು ಆರೋಪಿಗಳ ಶವ ಮರುಮರಣೋತ್ತರ ಪರೀಕ್ಷೆಗೆ ಹೈಕೋರ್ಟ್ ಆದೇಶ

Raghavendra Adiga

ಹೈದರಾಬಾದ್: ರಂಗಾರೆಡ್ಡಿ ಜಿಲ್ಲೆ ಶಾದ್‌ನಗರ ಬಳಿಯ ಚತನ್‌ಪಲ್ಲಿ ಜಮೀನಿನಲ್ಲಿ ನಡೆದ  ಎನ್‌ಕೌಂಟರ್‌ನಲ್ಲಿ ಪೊಲೀಸರಿಂದ ಹತ್ಯೆಗೀಡಾದ ನಾಲ್ವರ ಶವಗಳನ್ನು ಮರು ಮರಣೋತ್ತರ ಪರೀಕ್ಷೆ ಮಾಡುವಂತೆ ತೆಲಂಗಾಣ ಹೈಕೋರ್ಟ್ ಶನಿವಾರ ಆದೇಶಿಸಿದೆ. ನವೆಂಬರ್ 27 ರ ರಾತ್ರಿ ನಗರದ ಹೊರವಲಯದಲ್ಲಿ ಹೈದರಾಬಾದ್ ಪಶುವೈದ್ಯರೊಬ್ಬರ ಮೇಲೆ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಆರೋಪದಡಿ ಈ ಎನ್‌ಕೌಂಟರ್‌ ನಡೆದಿತ್ತು. ”

ಡಿಸೆಂಬರ್ 23 ರಂದು ಸಂಜೆ 5 ಗಂಟೆಯೊಳಗೆ ಎರಡನೇ ಶವಪರೀಕ್ಷೆ ನಡೆಸಿ ಪೂರ್ಣಗೊಳಿಸಲು ಮತ್ತು ಮೊಹರು ಮಾಡಿದ ಕವರ್‌ನಲ್ಲಿ ವಿವರವಾದ ವರದಿಯನ್ನು ಸಲ್ಲಿಸಲು ನ್ಯಾಯಾಲಯ ಹೇಳಿದೆ. ಅಲ್ಲದೆ ಅದಕ್ಕಾಗಿ ನವದೆಹಲಿಯ ಏಮ್ಸ್ ನ ಮೂವರು ಹಿರಿಯ ವೈದ್ಯರ ವೈದ್ಯಕೀಯ ಮಂಡಳಿಯನ್ನು ರಚಿಸುವಂತೆನ್ಯಾಯಾಲಯ ತೆಲಂಗಾಣ ರಾಜ್ಯ ಪ್ರಧಾನ ಕಾರ್ಯದರ್ಶಿ,ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಗೆ ಸೂಚಿಸಿದೆ. ಮರು-ಮರಣೋತ್ತರ ಪರೀಕ್ಷೆಯ ವೀಡಿಯೋ ಟೇಪ್ ಅನ್ನು ಸಹ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಗೆ ಸಲ್ಲಿಸಬೇಕೆಂದು ಹೇಳಿದೆ.

ಶವಪರೀಕ್ಷೆಯ ನಂತರ ಶವಗಳನ್ನು ಮೃತ ನಾಲ್ವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ. ನಗರಕ್ಕೆ ವೈದ್ಯಕೀಯ ಮಂಡಳಿಯ ಭೇಟಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಬೇಕೆಂದು ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಈ ಘಟನೆಯ ತನಿಖೆ, ಎನ್‌ಕೌಂಟರ್‌ನಲ್ಲಿ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಮತ್ತು ವಿಶ್ಲೇಷಣೆಗಾಗಿ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ರಾಜ್ಯ ಸರ್ಕಾರವು ಈ ಹಿಂದೆ ರಚಿಸಿದ ಎಸ್ಐಟಿಗೆ ನ್ಯಾಯಾಲಯ ನಿರ್ದೇಶನ ನೀಡಿತು. ಕೇಸ್ ಡೈರಿ, ಲಾಗ್‌ಬುಕ್‌ಗಳು, ಪ್ರಕರಣದಲ್ಲಿ ನೋಂದಾಯಿಸಲಾದ ಎಫ್‌ಐಆರ್ ಇತ್ಯಾದಿಗಳನ್ನು ಸಂಗ್ರಹಿಸಲು ಎಸ್‌ಐಟಿಗೆ ನಿರ್ದೇಶನ ನೀಡಿದೆ. ಸಂಗ್ರಹಿಸಿದ ಎಲ್ಲ ಸಾಕ್ಷ್ಯಗಳನ್ನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರಚಿಸಿರುವ ಮೂರು ಸದಸ್ಯರ ವಿಚಾರಣಾ ಆಯೋಗದ ಮುಂದೆ ಇಡಬೇಕು ಎಂದು ಅದು ಹೇಳಿದೆ.

SCROLL FOR NEXT