ದೇಶ

ಯೋಗಿ ಆದಿತ್ಯನಾಥ್ ಅವರು ಕೇಸರಿ ಬಟ್ಟೆ ತೊಡುವುದು 'ಸಾರ್ವಜನಿಕ ಸೇವೆ'ಗೆ: ಪ್ರಿಯಾಂಕಾ ಗಾಂಧಿಗೆ ತಿರುಗೇಟು 

Sumana Upadhyaya

ಲಕ್ನೊ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕೇಸರಿ ಧಿರಿಸಿನ ಬಗ್ಗೆ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಕಾರ್ಯಾಲಯ, ಎಲ್ಲವನ್ನೂ ತ್ಯಾಗ ಮಾಡಿ ಸಾರ್ವಜನಿಕ ಸೇವೆ ಮಾಡಲು ಯೋಗಿ ಆದಿತ್ಯನಾಥ್ ಅವರು ಕೇಸರಿ ಬಟ್ಟೆ ತೊಡುತ್ತಾರೆ ಎಂದು ಹೇಳಿದೆ.


ಪ್ರಿಯಾಂಕಾ ಗಾಂಧಿಯವರು ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಸಿಎಂ ಕಾರ್ಯಾಲಯ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೇಸರಿ ಬಟ್ಟೆಯನ್ನು ಧರಿಸುವುದು ಮಾತ್ರವಲ್ಲದೆ ಅದನ್ನು ಪ್ರತಿನಿಧಿಸುತ್ತಾರೆ. ಸಾರ್ವಜನಿಕ ಕ್ಷೇಮಕ್ಕಾಗಿ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಕೇಸರಿ ಬಣ್ಣದ ಬಟ್ಟೆ ತೊಡುತ್ತಿದ್ದು ಯೋಗಿಯವರು ಅದೇ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದೆ.


ಮತ್ತೊಂದು ಟ್ವೀಟ್ ನಲ್ಲಿ, ಸಾರ್ವಜನಿಕ ಸೇವೆ ಮತ್ತು ಅಭಿವೃದ್ಧಿಗಾಗಿ ಯೋಗಿ ಆದಿತ್ಯನಾಥ್ ಅವರು ಮಾಡುತ್ತಿರುವ ನಿರಂತರ ಯಜ್ಞ ಮತ್ತು ಸನ್ಯಾಸಿ ಜೀವನಕ್ಕೆ ಯಾರಾದರೂ ಅಡ್ಡಿಪಡಿಸುತ್ತಿದ್ದರೆ ಅವರಿಗೆ ಖಂಡಿತವಾಗಿಯೂ ಶಿಕ್ಷೆಯಾಗುತ್ತದೆ. 


ಆನುವಂಶಿಕತೆಯ ಮೂಲಕ ರಾಜಕೀಯವನ್ನು ಪಡೆದವರು ಮತ್ತು ದೇಶವನ್ನು ಕಡೆಗಣಿಸುವ ಮೂಲಕ ಸಮಾಧಾನಗೊಳಿಸುವ ರಾಜಕಾರಣದಲ್ಲಿ ತೊಡಗಿರುವವರಿಗೆ ಸಾರ್ವಜನಿಕ ಸೇವೆಯ ಅರ್ಥ ಆಗಲು ಹೇಗೆ ಸಾಧ್ಯ ಎಂದು ಪ್ರಿಯಾಂಕಾ ಗಾಂಧಿಗೆ ತಿರುಗೇಟು ನೀಡಿದ್ದಾರೆ.

SCROLL FOR NEXT