ನವದೆಹಲಿ: ಐಎನ್ ಎಕ್ಸ್ ಮಾಧ್ಯಮ ಪ್ರಕರಣದಲ್ಲಿ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಸಿಬಿಐ ವಿಚಾರಣೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಈ ಪ್ರಕರಣದಲ್ಲಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಈಗಾಗಲೇ ವಿಚಾರಣೆ ನಡೆಸಲಾಗಿದ್ದು, ವಿದೇಶ ಹಾಗೂ ಭಾರತದಲ್ಲಿ ಅವರಿಗೆ ಸೇರಿದ ಸುಮಾರು 54 ಕೋಟಿ ರೂ. ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ.
ಪಿ. ಚಿದಂಬರಂ ವಿತ್ತ ಸಚಿವರಾಗಿದ್ದ ಸಂದರ್ಭದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಮೇ 15, 2017ರಲ್ಲಿ ಸಿಬಿಐ ಎಫ್ ಐಆರ್ ದಾಖಲಿಸಿತ್ತು.
ಕಾರ್ತಿ ಚಿದಂಬರಂ , ಐಎನ್ ಎಕ್ಸ್ ಮಾಧ್ಯಮ ಹಾಗೂ ಅದರ ನಿರ್ದೇಶಕರಾದ ಪೀಟರ್ , ಇಂದ್ರಾಣಿ ಮುಖರ್ಜಿ ವಿರುದ್ದ ಇಡಿ ಕೂಡಾ ಎಫ್ ಐಆರ್ ದಾಖಲಿಸಿತ್ತು. ನಂತರ ಕಾರ್ತಿ ಚಿದಂಬರಂ ಅವರನ್ನು ಬಂಧಿಸಲಾಗಿತ್ತಾದರೂ ಜಾಮೀನು ಪಡೆದುಕೊಂಡಿದ್ದರು.