ಗೌಹಾಟಿ: ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಈಶಾನ್ಯ ರಾಜ್ಯ ವಿಶೇಷ ಪೌರತ್ವ ಮಸೂದೆಯನ್ನು ವಿರೋಧಿಸಿ ಹಿರಿಯ ಮಣಿಪುರಿ ಚಿತ್ರ ನಿರ್ದೇಶಕ ಅರಿಬಾಮ್ ಶ್ಯಾಮ್ ಶರ್ಮಾ ತಮಗೆ ನೀಡಲಾಗಿದ್ದ ಪದ್ಮಶ್ರೀ ಪುರಸ್ಕಾರವನ್ನು ಹಿಂತಿರುಗಿಸುವುದಾಗಿ ಹೇಳಿದ್ದಾರೆ.
2006ರಲ್ಲಿ ಶರ್ಮಾ ಆವರಿಗೆ ಅಂದಿನ ಯುಪಿಎ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿತ್ತು.ನಾಗರಿಕತ್ವ (ತಿದ್ದುಪಡಿ) ಮಸೂದೆ 2016ಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನಾ ಸ್ವರೂಪದಲ್ಲಿ ಈ ಪ್ರಶಸ್ತಿ ಹಿಂತಿರುಗಿಸುವುದಾಗಿ ಅವರು ಹೇಳಿದ್ದಾರೆ.
ಭಾನುವಾರ ತನ್ನ ನಿರ್ಧಾರವನ್ನು ಘೋಷಿಸಿದ ಶರ್ಮಾ, ಸೋಮವಾರ ಪ್ರಶಸ್ತಿಯನ್ನು ಮರಳಿಸುವ ಸಾಧ್ಯತೆ ಇದೆ."
"ನಾಗರಿಕತ್ವ ಮಸೂದೆಯ ವಿರುದ್ಧದ ಪ್ರತಿಭಟನೆಯ ಗುರುತಿನಂತೆ ನಾನು ಈ ಗೌರವವನ್ನು ಹಿಂದಿರುಗಿಸುತ್ತೇನೆ. ಈಶಾನ್ಯದ ಜನ, ನಿರ್ದಿಷ್ಟವಾಗಿ ಮಣಿಪುರದ ನಾಗರಿಕರಿಗೆ ಯಾವ ರಕ್ಷಣೆ ಇಲ್ಲ.ಒಂದು ವೇಳೆ ಮಸೂದೆ ಜಾರಿಯಾದರೆ ಸ್ಥಳೀಯ ಜನಸಂಖ್ಯೆ ನಾಶವಾಗಲಿದೆ ಎಂಬ ಭಯವಿದೆ "ಎಂದು ಅವರು ಮಣಿಪುರ ರಾಜಧಾನಿ ಇಂಪಾಲ್ ನಿಂದ ದೂರವಾಣಿ ಮೂಲಕ ಮಾತನಾಡಿದ್ದಾರೆ.
"ಮಸೂದೆ ಜಾಪ್ರಭುತ್ವದ ನಿಯಮಗಳಿಗೆ ವಿರುದ್ಧವಾಗಿದೆ. ಮಣಿಪುರ ಜನಸಂಖ್ಯೆಯು ಉತ್ತರ ಪ್ರದೇಶ ಅಥವಾ ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಿಗಿಂತಲೂ ಕಡಿಮೆ ಇದೆ.ಇತ್ತೀಚೆಗೆ ಇಲ್ಲಿ ಮಸೂದೆ ಸಂಬಂಧ ತೀವ್ರ ಪ್ರತಿಭಟನೆಗಳು ನಡೆಯುತ್ತಿದೆ" ಅವರು ಹೇಳೀದ್ದಾರೆ.
ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಆಗಮಿಸುವ ನಿರಾಶ್ರಿತ ಮುಸ್ಲಿಮೇತರ ಸಮುದಾಯಗಳ ನಾಗರಿಕರಿಗೆ ಭಾರತದ ಪೌರತ್ವ ನೀಡುವ ಪ್ರಸ್ತಾವನೆ ಇದರಲ್ಲಿದ್ದು ಈ ಮಸೂದೆ ಕುರಿತು ಈಶಾನ್ಯ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.