ದೇಶ

ಕಾರು ಚಾಲಕನ ಕೊಂದು ಆಸಿಡ್ ತುಂಬಿದ ಡ್ರಮ್ ನಲ್ಲಿ ಹಾಕಿದ ವೈದ್ಯ: ಮಧ್ಯ ಪ್ರದೇಶದಲ್ಲೊಂದು ಕ್ರೂರ ಘಟನೆ!

Sumana Upadhyaya

ಭೋಪಾಲ್: ರಾಜ್ಯ ಸರ್ಕಾರಿ ವೈದ್ಯ ತನ್ನ ಕಾರು ಚಾಲಕನನ್ನು ಕೊಂದು ಹಲವು ಭಾಗಗಳಾಗಿ ಕತ್ತರಿಸಿ ತನ್ನ ಬಾತ್ ರೂಂನಲ್ಲಿ ಆಸಿಡ್ ತುಂಬಿದ ಡ್ರಮ್ ನಲ್ಲಿ ಹಾಕಿಟ್ಟ ಘಟನೆ ಮಧ್ಯಪ್ರದೇಶದ ಹೊಶಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ವೈದ್ಯರು ತನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಕಾರು ಚಾಲಕ ವೀರೇಂದ್ರ ಸಂಶಯ ವ್ಯಕ್ತಪಡಿಸುತ್ತಿದ್ದ, ಅಲ್ಲದೆ ಆಗಾಗ ಕಿರುಕುಳ ಕೂಡ ನೀಡುತ್ತಿದ್ದ. ಇದರಿಂದ ಬೇಸತ್ತ ವೈದ್ಯ ಸುನಿಲ್ ಮಂತ್ರಿ(58ವ) ಕಾರು ಚಾಲಕನನ್ನು ಕೊಂದು ಆತನ ಮೃತದೇಹವನ್ನು ಕನಿಷ್ಠವೆಂದರೂ 24 ಭಾಗಗಳಾಗಿ ತುಂಡು ಮಾಡಿ ಡ್ರಮ್ ಒಳಗೆ ಹಾಕಿಟ್ಟರು.

ಭೋಪಾಲ್ ನಿಂದ 80 ಕಿಲೋ ಮೀಟರ್ ದೂರದಲ್ಲಿ ಹೊಶಂಗಬಾದ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ವೈದ್ಯರ ನಿವಾಸಕ್ಕೆ ದಾಳಿ ನಡೆಸಿ ತನಿಖೆ ಮಾಡಿ ಪ್ರಕರಣವನ್ನು ಬೇಧಿಸಿದ್ದಾರೆ.

ವೀರೇಂದ್ರ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ. ಈ ಸಂಬಂಧ ವೈದ್ಯರ ಮೇಲೆ ಸಂಶಯ ಉಂಟಾಗಿ ನಿನ್ನೆ ಬೆಳಗ್ಗೆ ವೈದ್ಯ ಮಂತ್ರಿಯ ಮನೆಯಲ್ಲಿ ವೀರುವಿನ ಕಡೆಯವರು ಜಗಳ ಮಾಡಿದ್ದರು. ಅಲ್ಲದೆ ಪೊಲೀಸರಿಗೆ ಸಹ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಪೊಲೀಸರ ತಂಡ ಡಾ ಮಂತ್ರಿ ಮನೆಗೆ ಆಗಮಿಸಿ ವಿಚಾರಣೆ ನಡೆಸಿದಾಗ ಸಂಶಯಬಂದು ಬಾತ್ ರೂಂಗೆ ಹೋದರು. ಅದನ್ನು ತೆರೆದು ನೋಡಿದಾಗ ಆಸಿಡ್ ತುಂಬಿದ ಡ್ರಮ್ ನಲ್ಲಿ ವೀರೇಂದ್ರನ ಶವದ ಭಾಗಗಳನ್ನು ತುಂಬಿಸಿ ಇಡಲಾಗಿತ್ತು. ಪೊಲೀಸರು ಸತತ ವಿಚಾರಣೆ ನಡೆಸಿದಾಗ ತಾನು ವೀರೇಂದ್ರನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೀರಿ ಎಂದು ಮಾತ್ರವಲ್ಲದೆ ಕಾರು ಚಾಲಕ ವೀರೇಂದ್ರನ ಬಳಿ ಬೇರೆ ಏನೋ ವಿಚಾರಗಳಿದ್ದು ಈ ಮೂಲಕ ವೈದ್ಯರಿಗೆ ಸತತವಾಗಿ ಬೆದರಿಕೆ ಹಾಕುತ್ತಿದ್ದಿರಬೇಕು. ಇದರಿಂದ ನೊಂದು ವೈದ್ಯರು ಈ ಕೃತ್ಯ ಎಸಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

SCROLL FOR NEXT