ಚಾಂಗ್ಸರಿ: ಪೌರತ್ವ ತಿದ್ದುಪಡಿ ಮಸೂದೆ ಯಾವುದೇ ಕಾರಣಕ್ಕೂ ಈಶಾನ್ಯ ರಾಜ್ಯಗಳ ಜನರ ಹಿತಾಸಕ್ತಿಗೆ ಧಕ್ಕೆಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಸ್ಸಾಂನಲ್ಲಿ ಭರವಸೆ ನೀಡಿದ್ದಾರೆ.
ಇಂದು ಅಸ್ಸಾಂನ ಆರೋಗ್ಯ ಸಚಿವ ಹಿಮತ ಬಿಸ್ವಾ ಶರ್ಮಾ ಅವರ ಕ್ಷೇತ್ರದಲ್ಲಿ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈಶಾನ್ಯ ರಾಜ್ಯಗಳ ಹಿತಾಸಕ್ತಿಗೆ ಧಕ್ಯೆಯಾಗಬಾರದು ಎಂಬುದು ರಾಷ್ಟ್ರೀಯ ಬದ್ಧತೆಯಾಗಿದೆ ಮತ್ತು ಸಂಪೂರ್ಣ ತನಿಖೆ ನಂತರ ರಾಜ್ಯ ಸರ್ಕಾರಗಳ ಶಿಫಾರಸಿನ ಮೇಲೆ ಪೌರತ್ವ ನೀಡಲಾಗುವುದು ಎಂದು ಹೇಳಿದರು.
ದೇಶವನ್ನು ಅಕ್ರಮವಾಗಿ ಪ್ರವೇಶಿಸಿದವರು ಮತ್ತು ತಮ್ಮ ಜೀವ ಉಳಿಸಿಕೊಳ್ಳಲು ಅನಿವಾರ್ಯವಾಗಿ ಮನೆ, ಮಠ ಬಿಟ್ಟು ಬಲವಂತವಾಗಿ ಬಂದವರಿಗೂ ಬಹಳ ವ್ಯತ್ಯಾಸ ಇದೆ ಎಂದು ಪ್ರಧಾನಿ ತಿಳಿಸಿದರು.
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಭಾಷೆ, ಸಂಸ್ಕೃತಿ, ಸಂಪನ್ಮೂಲ ರಕ್ಷಣೆಗೆ ಬದ್ಧವಾಗಿದೆ. ಅಸ್ಸಾಂ ಮತ್ತು ಈಶಾನ್ಯಾ ರಾಜ್ಯಗಳ ಜನರ ನಿರೀಕ್ಷೆ ಈಡೇರಿಸಲು ನಾವು ಸಿದ್ಧ ಎಂದು ಪ್ರಧಾನಿ ಹೇಳಿದರು.
ನಮ್ಮ ಸರ್ಕಾರ ಈಶಾನ್ಯ ಗಡಿ ರಾಜ್ಯದೊಂದಿಗೆ ಸಂಪರ್ಕವನ್ನು ಸುಧಾರಿಸುವುದಕ್ಕೆ ಅತ್ಯಧಿಕ ಮಹತ್ವ ನೀಡುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.