ದೇಶ

ಗೋವಾ: ಅರಣ್ಯ ಪ್ರದೇಶ ನಾಶ ಆರೋಪ, ಪರಿಕ್ಕರ್ ಪುತ್ರನಿಗೆ ನೋಟಿಸ್ ಜಾರಿ

Nagaraja AB

ಪಣಜಿ: ಗೋವಾದಲ್ಲಿ ಅರಣ್ಯ ನಾಶ ಆರೋಪದ ಮೇರೆಗೆ  ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪುತ್ರ ಅಭಿಜತ್ ಅವರಿಗೆ  ಬಾಂಬೆ ಹೈಕೋರ್ಟಿನ ಪಣಜಿ ವಿಭಾಗೀಯ ಪೀಠ  ನೋಟಿಸ್ ಜಾರಿ ಮಾಡಿದೆ.

ಪರಿಕ್ಕರ್ ಪ್ರಾಯೋಜಕತ್ವದ  ಪರಿಸರ ಸ್ನೇಹಿ ರೆಸಾರ್ಟ್ ನಿರ್ಮಾಣಕ್ಕೆ  ತಡೆ ನೀಡುವಂತೆ ಕೋರಿ ನೇತ್ರಾವಳಿ ಪಂಚಾಯತ್  ಉಪ  ಸರಪಂಚ್  ಅಭಿಜಿತ್  ದೇಸಾಯಿ ಕಳೆದ ವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ವನ್ಯಜೀವಿ ಅಭಯಾರಣ್ಯಕ್ಕೆ ಹೊಂದಿಕೊಂಡಂತೆ ಸುಮಾರು 90, ಸಾವಿರ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ರೆಸಾರ್ಟ್ ಯೋಜನೆಗಾಗಿ ಹಲವಾರು ಕಾನೂನುಗಳನ್ನು ಅಂಗೀಕರಿಸಲಾಗಿದ್ದು, ಈ  ಯೋಜನೆಯಿಂದ ಅರಣ್ಯ ಪ್ರದೇಶಗಳ ನಾಶವಾಗುತ್ತದೆ ಎಂದು  ಅಭಿಜಿತ್ ದೇಸಾಯಿ ಆರೋಪಿಸಿದ್ದಾರೆ.

ದಕ್ಷಿಣ ಗೋವಾ ಜಿಲ್ಲೆಯ ನೇತ್ರಾವಳಿ ವನ್ಯಜೀವಿ ಅಭಯಾರಣ್ಯ ಬಳಿ ನಿರ್ಮಿಸಲಾಗುತ್ತಿರುವ ಪರಿಸರ ಸ್ನೇಹಿ ರೆಸಾರ್ಟ್ ನಿಂದ ಅರಣ್ಯ ಪ್ರದೇಶಗಳ ನಾಶವಾಗಲಿದೆ ಎಂದು ಆರೋಪಿಸಿ ಪರಿಕ್ಕರ್ ಪುತ್ರ  ಅಭಿಜತ್ ವಿರುದ್ಧ ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ದೇಸಾಯಿ ಪರ ವಕೀಲ ಕಾರ್ಲೋಸ್ ಫೆರೀರಾ ಹೇಳಿದ್ದಾರೆ.

ಅಭಿಜತ್ ಮಾತ್ರವಲ್ಲದೆ ಈ ಪ್ರಕರಣದಲ್ಲಿ ತೊಡಗಿಸಿಕೊಂಡಿರುವ ಇತರ ಆರು ಮಂದಿಗೂ ನೋಟಿಸ್ ಜಾರಿಗೊಳಿಸಲಾಗಿದೆ. ಮಾರ್ಚ್ 14ರಂದು ವಿವರಣೆ ನೀಡುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.

SCROLL FOR NEXT