ರಾಯ್ಪುರ: ಪುಲ್ವಾಮ ಉಗ್ರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ಪ್ರಜೆಗಳ ಆಕ್ರೋಶ ಮುಗಿಲು ಮುಟ್ಟಿದ್ದು, ಪ್ರಜೆಗಳು ತಮ್ಮದೇ ಆದ ವಿನೂತನ ಶೈಲಿಯಲ್ಲಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಅತ್ತ ಮಹಾರಾಷ್ಟ್ರ ಟೊಮ್ಯಾಟೋ ಬೆಳೆಗಾರರು ತಮಗೆ ನಷ್ಟವಾದರೂ ಸರಿ ಪಾಕಿಸ್ತಾನಕ್ಕೆ ಮಾತ್ರ ತಾವು ಬೆಳೆದ ಟೊಮ್ಯಾಟೋ ರಫ್ತು ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಇದರ ಬೆನಲ್ಲೇ ಛತ್ತೀಸ್ ಘಡದ ಬೀದಿ ಬದಿಯ ಕಬಾಬ್ ವ್ಯಾಪಾರಿಯೊಬ್ಬರು ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ್ದಾರೆ.
ಛತ್ತೀಸ್ ಘಢದ ಜಗದಲ್ಪುರದಲ್ಲಿ ರಸ್ತೆ ಬದಿಯಲ್ಲಿನ ಕಬಾಬ್ ಅಂಗಡಿ ಮಾಲೀಕ ಅಂಜಲ್ ಸಿಂಗ್, ಪಾಕ್ ವಿರುದ್ಧ ಧಿಕ್ಕಾರ ಕೂಗುವ ಗ್ರಾಹಕರಿಗೆ 10 ರೂ. ರಿಯಾಯಿತಿ ದರದಲ್ಲಿ ಚಿಕನ್ ಲೆಗ್ ಪೀಸ್ ನೀಡುತ್ತೇನೆ ಎಂದು ಹೇಳಿದ್ದಾರೆ. ಕೇವಲ ಹೇಳಿಕೆ ನೀಡಿದ್ದಲ್ಲದೇ ತಮ್ಮ ತಳ್ಳುವ ಗಾಡಿ ಮೇಲೆ ಈ ಕುರಿತ ಪೋಸ್ಟರ್ ಕೂಡ ಹಾಕಿ ತಮ್ಮ ಅಂಗಡಿಗೆ ಆಗಮಿಸುವ ಪ್ರತೀ ಗ್ರಾಹಕರಿಂದ 'ಪಾಕಿಸ್ತಾನ ಮುರ್ದಾಬಾದ್' (ಪಾಕಿಸ್ತಾನಕ್ಕೆ ಧಿಕ್ಕಾರ) ಎಂದು ಕೂಗಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಂಜಲ್ ಸಿಂಗ್, 'ಪಾಕಿಸ್ತಾನ ಇದುವರೆಗೂ ಮಾನವೀಯತೆಯನ್ನು ಗೌರವಿಸಿಲ್ಲ. ಮುಂದೆಯೂ ಗೌರವಿಸುವುದಿಲ್ಲ. ಹೀಗಾಗಿ ಎಲ್ಲರೂ ಪಾಕಿಸ್ತಾನದ ವಿರುದ್ಧ ಧಿಕ್ಕಾರ ಕೂಗಿ. ಜನರು ತಮ್ಮೆಲ್ಲ ಆಕ್ರೋಶವನ್ನು ಹೊರಹಾಕಬೇಕು ಎಂದು ಹೇಳಿದ್ದಾರೆ.
ಇನ್ನು ಉರಿ ಉಗ್ರ ದಾಳಿ ಬಳಿಕ ಈಗಾಗಲೇ ಕೇಂದ್ರ ಸರ್ಕಾರದ ಪಾಕ್ ನೊಂದಿಗಿನ ವ್ಯಾಪಾರ ಸಂಬಂಧವನ್ನು ಕಡಿದುಕೊಂಡಿದೆ. ಪುಲ್ವಾಮ ಉಗ್ರ ದಾಳಿ ಬಳಿಕ ಚಿತ್ರರಂಗದಲ್ಲಿ ಪಾಕ್ ಕಲಾವಿದರಿಗೆ ನಿರ್ಭಂಧ ಹೇರಲಾಗಿದ್ದು, ಹಲವು ಕ್ರೀಡಾಂಗಣದಲ್ಲಿರುವ ಪಾಕ್ ಕ್ರಿಕೆಟಿಗರ ಫೋಟೋಗಳನ್ನು ತೆರವುಗೊಳಿಸಲಾಗಿದೆ. ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಆಡದಿರುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಪಾಕ್ ವಿರುದ್ಧ ಭಾರತ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಪಾಕಿಸ್ತಾನವನ್ನು ಏಕಾಂಗಿಯಾಗಿಸುವತ್ತ ಭಾರತ ಹೆಜ್ಜೆ ಇಟ್ಟಿದೆ.