ನವದೆಹಲಿ: ಸೌದಿ ದೊರೆ ಮಹಮದ್ ಬಿನ್ ಸಲ್ಮಾನ್ ಅವರ ಭಾರತ ಪ್ರವಾಸದಿಂದಾಗಿ ಸೌದಿಯಲ್ಲಿರುವ ಸುಮಾರು 850 ಖೈದಿಗಳಿಗೆ ಬಿಡುಗಡೆ ಭಾಗ್ಯ ದೊರೆತಿದೆ.
ಹೌದು. ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಸೌದಿ ದೊರೆ ಮಹಮದ್ ಬಿನ್ ಸಲ್ಮಾನ್ ವಿವಿಧ ಪ್ರಕರಣಗಳಲ್ಲಿ ಸಿಲುಕಿ ತಮ್ಮ ದೇಶದ ವಿವಿಧ ಜೈಲುಗಳಲ್ಲಿರುವ ಭಾರತ ಮೂಲದ ಸುಮಾರು 850 ಖೈದಿಗಳನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದ್ದಾರೆ.
ದೆಹಲಿಯಲ್ಲಿ ನಿನ್ನೆ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಹಾಗೂ ಅಧಿಕಾರಿಗಳ ಭೇಟಿ ಮಾಡಿದ ಬಳಿಕ ಸೌದಿ ದೊರೆ ಇಂತಹುದೊಂದು ಪ್ರಮುಖ ನಿರ್ಣಯ ಕೈಗೊಂಡಿದ್ದಾರೆ. ಇದೇ ವೇಳೆ ಭಾರತ ಪ್ರವಾಸ ಮಾಡಲಿಚ್ಛಿಸುವ ಸೌದಿ ಪ್ರಜೆಗಳಿಗೆ ಅನುಕೂಲವಾಗುವಂತೆ ಭಾರತೀಯ ವಿದೇಶಾಂಗ ಸಚಿವಾಲಯ ಇ ವೀಸಾ ವ್ಯವಸ್ಥೆ ಜಾರಿ ಮಾಡುವುದಾಗಿ ಭರವಸೆ ನೀಡಿದೆ. ಇದಕ್ಕೆ ಪ್ರತಿಯಾಗಿ ಸೌದಿ ಸರ್ಕಾರ ಕೂಡ ತಮ್ಮ ದೇಶಕ್ಕೆ ಕೆಲಸಕ್ಕಾಗಿ ಬಂದು ಸಂಕಷ್ಟ ಅನುಭವಿಸುತ್ತಿರುವ ಭಾರತ ಮೂಲದ ಪ್ರಜೆಗಳಿಗೆ ನೆರವು ನೀಡುವುದಾಗಿ ಹೇಳಿದೆ.
ಇನ್ನು ಉಭಯ ದೇಶಗಳೂ ಇದೇ ಸಂದರ್ಭದಲ್ಲಿ ನಾನಾ ಒಪ್ಪಂದಗಳಿಗೆ ಸಹಿ ಹಾಕಿದ್ದು, ಈ ಪೈಕಿ ಸೋಲಾರ್ ಮಿತ್ರ ಕೂಟಕ್ಕೆ ಸೌದಿ ಸೇರ್ಪಡೆಯಾಗಿದ್ದು, ಇದು ಮಾತ್ರವಲ್ಲದೇ ನವೀಕರಿಸಬಹುದಾದ ಇಂಧನ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಹೂಡಿಕೆ ಮಾಡುವ ಕುರಿತು ಉಭಯ ದೇಶಗಳ ನಾಯಕರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.