ನವದೆಹಲಿ: ರಾಷ್ಟ್ರೀಯ ಯುದ್ಧ ಸ್ಮಾರಕದ ಮೂಲಕ ದೇಶದ ಜನತೆಗೆ ಮತ್ತೊಂದು ಪ್ರವಾಸಿ ತಾಣ ಸಿಕ್ಕಂತಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಲೋಕಾರ್ಪಣೆಯಾದ ರಾಷ್ಟ್ರೀಯ ಯುದ್ಧ ಸ್ಮಾರಕದ ಉದ್ಘಾಟನೆ ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, ಯುದ್ಧ ಸ್ಮಾರಕದ ಮೂಲಕ ದೇಶದ ಜನತೆಗೆ ಮತ್ತೊಂದು ಯಾತ್ರಾ ಸ್ಥಳ ಸಿಕ್ಕಂತಾಗಿದೆ. ಈಗ ದೇಶದ ಪ್ರತೀಯೊಬ್ಬ ನಾಗರಿಕನೂ ಕೂಡ ನಮ್ಮನ್ನು ಕಾಯುವ ಸೈನಿಕರಿಗೆ ಇಲ್ಲಿಂದಲೇ ಗೌರವ ಸಲ್ಲಿಕೆ ಮಾಡಬಹುದು ಎಂದು ಹೇಳಿದರು.
ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿವೃತ್ತ ಸೇನಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ನಮಗೆ ಅಗತ್ಯವಿರುವುದು ಪ್ರಧಾನಿ ಮೇಲೆ ನಿಮ್ಮ ನಂಬಿಕೆ. ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ನಮ್ಮ ಮೊದಲ ಆದ್ಯತೆಯಾಗಿದೆ’ ಎಂದು ಹೇಳಿದರು. ಅಂತೆಯೇ ಸ್ಮಾರಕದ ಕುರಿತು ಮಾತನಾಡಿಗ ನಿರ್ಮಲಾ ಸೀತಾರಾಮನ್, ಇಂತಹ ಅದ್ಭುತ ಸ್ಮಾರಕ ಲೋಕಾರ್ಪಣೆಯಾಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ. ಸ್ಮಾರಕದ ಮೂಲಕ ದೇಶಕ್ಕೆ ಮತ್ತೊಂದು ಯಾತ್ರಾತಾಣ ಸಿಕ್ಕಂತಾಗಿದೆ. ದೇಶಕ್ಕಾಗಿ 1962 ಇಂಡೋ-ಚೈನಾ ಯುದ್ಧ, 1947ರ ಇಂಡೋ-ಪಾಕ್ ಯುದ್ಧ, ಶ್ರೀಲಂಕಾದಲ್ಲಿ 1965 ಮತ್ತು 1971 ಶಾಂತಿ ಪಾಲನಾಪಡೆಯಲ್ಲಿದ್ದ ಭಾರತೀಯ ಪಡೆಗಳ ಮೇಲಿನ ದಾಳಿ ಮತ್ತು ಕಾರ್ಗಿಲ್ ಯುದ್ಝದ ವೇಳೆ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸಲು ಈ ಅದ್ಭುತ ಸ್ಮಾರಕ ನಿರ್ಮಾಣವಾಗಿದೆ ಎಂದು ಹೇಳಿದರು.
ಅಂತೆಯೇ ಭಾರತ ಸ್ವಾತಂತ್ರ್ಯಗೊಳ್ಳುವ ಮುನ್ನವೇ ಅಂದರೆ ಆಪ್ಘಾನಿಸ್ತಾನ-ವಜೀರಿಸ್ಥಾನ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ದೇಶದ ಹಿತಾಸಕ್ತಿ ರಕ್ಷಣೆಗಾಗಿ ಅಂದು 25 ಸಾವಿರಕ್ಕೂ ಅಧಿಕ ಯೋಧರು ಹುತಾತ್ಮರಾಗಿದ್ದರು. ಅವರನ್ನೂ ಸಹ ದೇಶದ ಜನತೆ ಮರೆಯುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಇಂಡಿಯಾ ಗೇಟ್ ಸಮೀಪ 40 ಎಕರೆ ವಿಸ್ತೀರ್ಣದಲ್ಲಿ ಸ್ಮಾರಕ ತಲೆ ಎತ್ತಿದೆ. ನಾಲ್ಕು ಕೇಂದ್ರೀಕೃತ ವಲಯಗಳನ್ನು ನಿರ್ಮಿಸಲಾಗಿದ್ದು, ಪುರಾತನ ಚಕ್ರವ್ಯೂಹ ಯುದ್ಧತಂತ್ರಗಾರಿಕೆಯನ್ನು ಇದು ಸಂಕೇತಿಸುತ್ತದೆ. 15 ಅಡಿ ಎತ್ತರದ ಸ್ತಂಭದ ಮೇಲೆ ಇರಿಸಿರುವ ಜ್ಯೋತಿಯನ್ನು ಬೆಳಗುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸ್ಮಾರಕ ಲೋಕಾರ್ಪಣೆ ಮಾಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos