ದೇಶ

ಶಬರಿಮಲೆ ಪ್ರತಿಭಟನೆ: 48 ಗಂಟೆಗಳಲ್ಲಿ 266 ಬಂಧನ ಮುನ್ನೆಚ್ಚರಿಕ ಕ್ರಮವಾಗಿ 334 ಜನ ವಶಕ್ಕೆ!

Srinivas Rao BV
ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ನಿರ್ಬಂಧಿತ ವಯಸ್ಸಿನ ಮಹಿಳೆಯರು ಪ್ರವೇಶಮಾಡಿದ ನಂತರ ಕೇರಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಪ್ರತಿಭಟನೆ ಹಿಂಸಾಚಾರದ ರೂಪ ಪಡೆಯುವುದನ್ನು ತಡೆಗಟ್ಟಲು ಪೊಲೀಸರು ಹಲವು ಕ್ರಮ ಕೈಗೊಂಡಿದ್ದಾರೆ. 
ಹಿಂಸಾಚಾರದ ಪ್ರತಿಭಟನೆಯಲ್ಲಿ ತೊಡಗಿರುವವರನ್ನು ಪೊಲೀಸರು ಮುಲಾಜಿಲ್ಲದೇ ಬಂಧಿಸಿದ್ದು, ಈ ರೀತಿಯ ಪ್ರತಿಭಟನೆಯಲ್ಲಿ ತೊಡಗಿ ಬಂಧನಕ್ಕೊಳಗಾದ ಪ್ರತಿಭಟನಾಕಾರರ ಸಂಖ್ಯೆ 48 ಗಂಟೆಗಳಲ್ಲಿ 266 ಕ್ಕೆ ಏರಿಕೆಯಾಗಿದೆ.  ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬರೊಬ್ಬರಿ 334 ಜನರನ್ನು ವಶಕ್ಕೆ ಪಡೆದಿದ್ದಾರೆ. 
ಹಿಂದೂ ಸಂಘಟನೆಗಳು ಕರೆ ನೀಡಿರುವ ಪ್ರತಿಭಟನೆಯ ನಂತರ ಹಿಂಸಾಚಾರವಾಗಿರುವ ಬಗ್ಗೆ ವರದಿಗಳು ಪ್ರಕಟವಾಗಿದ್ದು, ಈ ರೀತಿಯ ಪ್ರತಿಭಟನೆಯನ್ನು ಹತ್ತಿಕ್ಕುವುದಕ್ಕಾಗಿ ಕೇರಳ ರಾಜ್ಯ ಪೊಲೀಸರು ಆಪರೇಷನ್ ಬ್ರೋಕನ್ ವಿಂಡೋ ಎಂಬ ಕಾರ್ಯಾಚಾರಣೆಯನ್ನು ಪ್ರಾರಂಭಿಸಿದ್ದಾರೆ. 
ಕಾರ್ಯಾಚರಣೆಯ ಭಾಗವಾಗಿ ಹಿಂಸಾಚಾರದಲ್ಲಿ ತೊಡಗಿರುವ ಪ್ರತಿಭಟನಾ ನಿರತರನ್ನು ಬಂಧಿಸುವುದಷ್ಟೇ ಅಲ್ಲದೇ ಅವರ ಮೊಬೈಲ್ ಫೋನ್ ಗಳನ್ನು ವಶಕ್ಕೆ ತೆಗೆದುಕೊಂಡು ಡಿಜಿಟಲ್ ಪರಿಶೀಲನೆಗೆ ನೀಡಲಾಗುತ್ತದೆ ಹಾಗೂ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಶಂಕೆಯಿಂದ ಪ್ರತಿಭಟನಾಕಾರರ ಮನೆಗಳ ಮೇಲೆ ದಾಳಿಯನ್ನೂ ನಡೆಸಲಾಗುತ್ತದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 
ಇನ್ನು ಸಾಮಾಜಿಕ ಜಾಲತಾಣದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ ಎಂದು ಕೇರಳ ಪೊಲೀಸ್ ಇಲಾಖೆ ತಿಳಿಸಿದೆ. 
SCROLL FOR NEXT