ನವದೆಹಲಿ: ಹೆಚ್ಎಎಲ್ ಗೆ ನೀಡಲಾಗಿರುವ ಯೋಜನೆಗಳನ್ನು ಸಾಬೀತುಪಡಿಸಿ ಇಲ್ಲವೇ ರಾಜೀನಾಮೆ ನೀಡಿ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.
ಹಿಂದೂಸ್ಥಾನ್ ಏರೋನ್ಯಾಟಿಕ್ ಲಿಮಿಟೆಡ್ ಸಂಸ್ಥೆಗೆ ಬರೊಬ್ಬರಿ ಒಂದು ಲಕ್ಷ ಕೋಟಿಯಷ್ಟು ಮೌಲ್ಯದ ಪ್ರೊಕ್ಯುರ್ಮೆಂಟ್ ಆರ್ಡರ್ ನ್ನು ನೀಡಲಾಗಿರುವುದರ ಬಗ್ಗೆ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳುತ್ತಿದ್ದಾರೆ. ಆದರೆ ಹೆಚ್ಎಎಲ್ ಗೆ ಈ ವರೆಗೂ ಒಂದೇ ಒಂದೂ ಯೋಜನೆಯೂ ಸಿಕ್ಕಿಲ್ಲ. ಬದಲಾಗಿ ನೌಕರರಿಗೆ ವೇತನ ನೀಡುವುದಕ್ಕಾಗಿ ಸಂಸ್ಥೆ ಸಾಲ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಹಾಗೂ ಪಕ್ಷದ ನಾಯಕ ರಣ್ದೀಪ್ ಸುರ್ಜೆವಾಲ ಆರೋಪಿಸಿದ್ದಾರೆ.
ಹೆಚ್ಎಎಲ್ ಗೆ ಆರ್ಡರ್ ಗಳನ್ನು ನೀಡಿರುವ ಬಗ್ಗೆ ಸರ್ಕಾರ ಕೂಡಲೇ ಸಂಸತ್ ನಲ್ಲಿ ದಾಖಲೆಗಳನ್ನು ಒದಗಿಸಬೇಕು ಅಥವಾ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ಹಾಗೂ ರಣ್ದೀಪ್ ಸುರ್ಜೆವಾಲ ಆಗ್ರಹಿಸಿದ್ದಾರೆ. ಅನಿಲ್ ಅಂಬಾನಿಯ ರಕ್ಷಣಾ ಉತ್ಪಾದನೆ ಸಂಸ್ಥೆಗೆ ಲಾಭ ಮಾಡಿಕೊಡಲು ಹೆಚ್ಎಎಲ್ ಸಂಸ್ಥೆಗೆ ಕೇಂದ್ರ ಸರ್ಕಾರ ಯೋಜನೆಗಳನ್ನು ನೀಡುತ್ತಿಲ್ಲ ಎಂಬುದು ಕಾಂಗ್ರೆಸ್ ಆರೋಪವಾಗಿದೆ.