ಕುಶೀನಗರ: ಲೈಂಗಿಕ ದೌರ್ಜನ್ಯವನ್ನು ಪ್ರತಿಭಟಿಸಿದ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವ ಬದಲು ಕಾಲೇಜಿನಿಂದಲೇ ಗೇಟ್ ಪಾಸ್ ನೀಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕುಶೀನಗರದಲ್ಲಿ ನಡೆದಿದೆ.
ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಪ್ರಥಮ ವರ್ಷದ ವಿದ್ಯಾರ್ಥಿನಿ ಮಹಾತ್ಮಾ ಗಾಂಧಿ ಇಂಟರ್ ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ಆದರೆ ಈ ಘಟನೆ ಕ್ಯಾಂಪಸ್ ನಿಂದ ಹೊರಗೆ ನಡೆದಿದ್ದು, ನಮ್ಮ ವ್ಯಾಪ್ತಿಗೆ ಈ ಪ್ರಕರಣ ಬರುವುದಿಲ್ಲ ಎಂದು ದೂರನ್ನು ಸ್ವೀಕರಿಸಲು ಆಡಳಿತ ಮಂಡಳಿ ನಿರಾಕರಿಸಿದೆ. ಆಡಳಿತ ಮಂಡಳಿಯ ನಡೆಯನ್ನು ಖಂಡಿಸಿ ವಿದ್ಯಾರ್ಥಿನಿ ಪ್ರತಿಭಟಿಸಿದ ಪರಿಣಾಮ ಆಕೆಗೆ ಕಾಲೇಜ್ ನಿಂದ ಗೇಟ್ ಪಾಸ್ ನೀಡಲಾಗಿದೆ.
ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿದ ಯುವತಿಯ ಕುರಿತು ಪ್ರಾರ್ಥನಾ ಸಭೆಯಲ್ಲಿ ಮಾತನಾಡಿದ್ದ ಕಾಲೇಜು ಪ್ರಾಂಶುಪಾಲರು, ಕಾಲೇಜಿಗೆ ಕೆಟ್ಟ ಹೆಸರು ತರುವ ಈ ರೀತಿಯ ಯುವತಿಯರು ಇಲ್ಲಿ ಇರಬೇಕಾಗಿಲ್ಲ ಎಂದು ಹೇಳಿದ್ದಾಗಿ ಯುವತಿ ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಸಂತ್ರಸ್ತೆಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.