ದೇಶ

ರಾಫೆಲ್ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರ ದಾರಿ ತಪ್ಪಿಸುತ್ತಿದೆ: ಗುಲಾಂ ನಬಿ ಅಜಾದ್

Nagaraja AB

ನವದೆಹಲಿ: ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ವಿಚಾರದಲ್ಲಿ ಕೇಂದ್ರಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಅಜಾದ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಫೆಲ್ ಯುದ್ಧ ವಿಮಾನ ವಿಚಾರದಲ್ಲಿ ಸಂಸತ್ತಿನ ಒಳಗೆ ಹಾಗೂ ಹೊರಗೆ ಕೇಂದ್ರಸರ್ಕಾರ ಸುಳ್ಳು ಹೇಳುತ್ತಿದೆ. ಎಚ್ ಎಎಲ್ ಗೆ ಗುತ್ತಿಗೆ ನೀಡಲಾಗಿತ್ತು ಎಂದು  ಕೇಂದ್ರಸರ್ಕಾರ ಹೇಳುತ್ತಿದೆ. ಆದರೆ, ಇದು ನಿಜವಲ್ಲಾ ಎಂದರು.

 ರಾಫೆಲ್ ವಿಚಾರದಲ್ಲಿ ಸುಳ್ಳನ್ನು ಹರಡಲಾಗುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್  ರಾಹುಲ್ ಗಾಂಧಿ ಮೇಲೆ  ವಾಗ್ದಾಳಿ ನಡೆಸಿದ ನಂತರ ಗುಲಾಮ್ ನಬಿ ಅಜಾದ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಸಿಬಿಐ, ಇಡಿ ಮತ್ತಿತರ ತನಿಖಾ ಸಂಸ್ಥೆಗಳನ್ನು  ದುರುಪಯೋಗಪಡಿಸಿಕೊಳ್ಳುವ ಮೂಲಕ ಪ್ರತಿಪಕ್ಷಗಳ ಒಗ್ಗಟ್ಟು ಮುರಿಯಲು ಸರ್ಕಾರ ಯತ್ನಿಸುತ್ತಿದೆ. ನಾಲ್ಕೂವರೆ ವರ್ಷಗಳ ಹಿಂದೆ ಉದ್ಯೋಗ, ರೈತರ ಸಮಸ್ಯೆಗಳು ಹಾಗೂ ಮಹಿಳೆಯರ  ಭದ್ರತೆ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಿದ್ದರು. ಆದರೆ,  ಈಗಿನ ಸರ್ಕಾರ ಸಿಬಿಐ, ಇಡಿ, ಆದಾಯ ತೆರಿಗೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಟೀಕಿಸಿದರು.

ಬಹುಜನ ಸಮಾಜ ಪಕ್ಷದೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಎಸ್ಪಿ ಮುಖ್ಯಸ್ಥ ಅಳಿಲೇಶ್ ಯಾದವ್ ವಿರುದ್ದ ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಡಿ ನೋಟಿಸ್ ನೀಡುವಂತೆ  ಸಿಬಿಐ ಮೇಲೆ ಒತ್ತಡ ಹಾಕಲಾಗುತ್ತಿದೆ. ಕಾಂಗ್ರೆಸ್  ಬಿಜೆಪಿ ವಿರುದ್ಧ ಯಾವುದೇ ಪ್ರಕರಣ ದಾಖಲಿಸದಿದ್ದರೂ ಏಕೆ ಮಹಾಘಟ ಬಂಧನ್ ಪಕ್ಷಗಳ ನಾಯಕರ ಮೇಲೆ ಕೇಸ್ ಹಾಕಲಾಗುತ್ತಿದೆ ಎಂದು ಗುಲಾಂ ನಬಿ ಅಜಾದ್ ಪ್ರಶ್ನಿಸಿದ್ದಾರೆ.

SCROLL FOR NEXT