ದೇಶ

ಭಾರತ್ ಬಂದ್: ದೇಶದಾದ್ಯಂತ ಮಿಶ್ರ ಪ್ರತಿಕ್ರಿಯೆ, ಯಥಾಸ್ಥಿತಿಯತ್ತ ಹಲವು ರಾಜ್ಯಗಳು

Manjula VN
ನವದೆಹಲಿ: ಕೇಂದ್ರ ಸರ್ಕಾರದ ಹಲವು ನೀತಿಗಳನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ನೀಡಿದ್ದ ಎರಡು ದಿನಗಳ ಭಾರತ್ ಬಂದ್ ಕರೆಗೆ ದೇಶದಾದ್ಯಂತ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ. 
ಬೆಂಗಳೂರು ನಗರದಲ್ಲಿ ಕೆಎಸ್ಆರ್'ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದರೆ, ಕಡಿಮೆ ಸಂಖ್ಯೆಯಲ್ಲಿ ಬಿಎಂಟಿಸಿ ಬಸ್ ಸಂಚಾರ ನಡೆಸುತ್ತಿವೆ. ಕೆಲವೆಡೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿರುವುದಾಗಿ ವರದಿಗಳಾಗಿವೆ. 
ಪೀಣ್ಯದಿಂದ ಮೆಜೆಸ್ಟಿಕ್'ಗೆ ಬರುತ್ತಿದ್ದ ಬಸ್'ಗೆ ಬೈಕ್ ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟ ಹಿನ್ನೆಲೆಯಲ್ಲಿ ಡಿಪೋ ನಂಬರ್ 98ಕ್ಕೆ ಸೇರಿದ ಬಸ್ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿ ಇಳಿಸುವಂತಾಗಿದೆ. 
ಇನ್ನು ಕೊಡಗು, ಚಿಕ್ಕಮಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಬೆಳಗಾವಿ, ರಾಮನಗರ, ಹಾವೇರಿಯಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. 
ಬಂದ್'ಗೆ ವಾಣಿಜ್ಯ ನಗರಿ ಮುಂಬೈನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಸ್ ಗಳಿಲ್ಲದೆ ಜನರು ಪರದಾಡುವಂತರ ಪರಿಸ್ಥಿತಿ ಎದುರಾಗಿದೆ. 
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಸಿಪಿಎಂ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವುದಾಗಿ ವರದಿಗಳು ತಿಳಿಸಿವೆ. ಇದಲ್ಲದೆ, ಬರಸತ್'ನ ಚಂಪದಲಿ ಪ್ರದೇಶದಲ್ಲಿ ಶಾಲಾ ಬಸ್ ಮೇಲೆ ಕಲ್ಲು ತೂರಾಟಗಳು ನಡೆದಿರುವುದಾಗಿ ತಿಳಿದುಬಂದಿದೆ.
ಕೇರಳ ರಾಜ್ಯದಲ್ಲಿ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಪ್ರತಿಭಟನಾನಿರತರು ತಿರುವನಂತಪುರಂ ಮತ್ತು ಅಲಪ್ಪುಝಾ ರೈಲ್ವೇ ನಿಲ್ದಾಣವನ್ನು ತಡೆ ಹಿಡಿದಿದ್ದು, ಇದರ ಪರಿಣಾಮ ಹಲವು ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಪ್ರತಿಭಟನೆ ಪರಿಣಾಮ ರೈಲು ಸಂಚಾರ ವಿಳಂಬಗೊಂಡಿದೆ. 
SCROLL FOR NEXT