ನವದೆಹಲಿ: ನಾಗರಿಕತ್ವದ ಮಸೂದೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್ 2ನೇ ದಿನಕ್ಕೆ ಕಾಲಿಟ್ಟಿದ್ದು, ಉತ್ತರ ಭಾರತದ ಮತ್ತು ಈಶಾನ್ಯ ಭಾರತದ ಕೆಲ ರಾಜ್ಯಗಳಲ್ಲಿ ಬಂದ್ ನಿಂದಾಗಿ ನಾಗರಿಕರು ಅವಸ್ಥೆ ಪಡುವಂತಾಗಿದೆ.
ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಂತೆಯೇ ಅತ್ತ ಈಶಾನ್ಯ ಭಾರತದಲ್ಲಿ ಸಿಟಿಜನ್ ಷಿಪ್ ಮಸೂದೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು. ಇದನ್ನು ವಿರೋಧಿಸಿ ಈಶಾನ್ಯ ಭಾರತದ ವಿದ್ಯಾರ್ಥಿಗಳ ಸಂಘಟನೆ 11 ಗಂಟೆಗಳ ಈಶಾನ್ಯ ಭಾರತ ಬಂದ್ ಗೆ ಕರೆ ನೀಡಿದೆ. ಅಂತೆಯೇ ಮಸೂದೆ ವಿರೋಧಿಸಿ ನಡೆದ ವಿವಿಧ ಪ್ರತಿಭಟನೆ ಹಾಗೂ ಹಿಂಸಾಚಾರದಲ್ಲಿ ಈ ವರೆಗೂ 6 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ತ್ರಿಪುರಾದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾರೂಪ ಪಡೆದಿದ್ದು, ತ್ವಿಪ್ರಾ ಸ್ಟೂಡೆಂಟ್ಸ್ ಫೆಡರೇಷನ್ ನ 6 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಈ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಕೇವಲ ಮಣಿಪುರ ಮಾತ್ರವಲ್ಲದೇ ಅಸ್ಸಾಂ ಮತ್ತು ಮಿಜೋರಾಂ ನಲ್ಲೂ ಮಸೂದೆಯನ್ನು ವಿರೋಧಿಸಿ ಬಂದ್ ಆಚರಿಸಲಾಗುತ್ತಿದೆ. ಪ್ರಮುಖವಾಗಿ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಮುಸ್ಲೀಮೇತರ ಸಮುದಾಯವನ್ನು ಹೊರತು ಪಡಿಸಿ ಉಳಿದ ಸಮುದಾಯಗಳು ವಿಚಾರಣೆ ಎದುರಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.