ನವದೆಹಲಿ: 2016ರ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ(ಜೆಎನ್ ಯುಎಸ್ ಯು)ದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಸೇರಿದಂತೆ 10 ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಸೋಮವಾರ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಜೆಎನ್ ಯು ಆವರಣದಲ್ಲಿ ಫೆಬ್ರವರಿ 9, 2016ರಂದು ನಡೆದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಜೆಎನ್ಯು ಮಾಜಿ ವಿದ್ಯಾರ್ಥಿಗಳಾದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅಖಿಬ್ ಹುಸ್ಸೇನ್ , ಮುಜೀಬ್ ಹುಸ್ಸೇನ್, ಮುನೀಬ್ ಹುಸ್ಸೇನ್, ಉಮರ್ ಗುಲ್, ರಯೀಬ್, ಬಸೀರ್ ಭಟ್ ಮತ್ತು ಬಶರತ್ ವಿರುದ್ಧ ಇಂದು ಚಾರ್ಜ್ಶೀಟ್ ದಾಖಲಿಸಲಾಗಿದೆ.
ದೆಹಲಿ ಪೊಲೀಸರು ಪಟಿಯಾಲ ಹೌಸ್ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದು, ಕೋರ್ಟ್ ಅದನ್ನು ನಾಳೆ ಪರಿಗಣನೆಗೆ ತೆಗೆದುಕೊಳ್ಳಲಿದೆ.
ಸಂಸತ್ ಭವನದ ಮೇಲೆ ದಾಳಿ ನಡೆಸಿದ ಪ್ರಕರಣದ ಪ್ರಮುಖ ರೂವಾರಿ ಅಫ್ಜಲ್ ಗುರುನನ್ನು ನೇಣಿಗೆ ಏರಿಸಿದ್ದನ್ನು ಖಂಡಿಸಿ ಈ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ನಲ್ಲಿ ವಿರೋಧಿಸಿದ್ದರು. ಆ ನಂತರ ಇವರನ್ನು ಬಂಧಿಸಿದ್ದು ದೇಶಾದ್ಯಂತ ದೊಡ್ಡ ವಿವಾದ ಸೃಷ್ಟಿಸಿತ್ತು. ಪೊಲೀಸರು ಆಡಳಿತಾರೂಢ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷ ಆರೋಪಿಸಿತ್ತು.