ದೇಶ

ಅಕ್ರಮ ಸಂಬಂಧ ಶಂಕೆ: ಮಲಗಿದ್ದ ಪತಿಯ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ ಪತ್ನಿ

Srinivasamurthy VN
ಭುವನೇಶ್ವರ್: ತನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ್ದ ಪತ್ನಿಯೊಬ್ಬರು ಆತ ಮಲಗಿದ್ದಾಗ ಆತನ ಮರ್ಮಾಂಗವನ್ನೇ ಕತ್ತರಿಸಿ ಹಾಕಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ನಬರಾಂಗ್ಪುರ ಜಿಲ್ಲೆಯ ಉದಯ್ ಪುರ ಗ್ರಾಮದ ಟೆಂಟುಲ್ಕುಂಟಿ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಪತಿಯ ಮರ್ಮಾಂಗಕ್ಕೆ ಕತ್ತರಿ ಹಾಕಿದ ಮಹಿಳೆಯನ್ನು ಗಂಗೀ ಹರಿಜನ್ ಎಂದು ಗುರುತಿಸಲಾಗಿದೆ. ಅಂತೆಯೇ ಪತ್ನಿಯಿಂದಲೇ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಪತಿಯನ್ನು ಸದಾಶಿವ ಹರಿಜನ್ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಭಾನುವಾರ ತಡವಾಗಿ ಮನೆಗೆ ಬಂದ ಸದಾಶಿವ ಹರಿಜನ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಪತ್ನಿ ಶಂಕಿಸಿದ್ದಳು. ಈ ಬಗ್ಗೆ ಈ ಹಿಂದೆ ಹಲವು ಬಾರಿ ಇವರಿಬ್ಬರ ನಡುವೆ ಜಗಳವಾಗಿತ್ತು. ಭಾನುವಾರ ರಾತ್ರಿಯೂ ಈ ಬಗ್ಗೆ ಮಾತಿನ ಚಕಮಕಿ ನಡೆದಿತ್ತು ಎಂದು ಹೇಳಲಾಗಿದೆ. ಸದಾಶಿವ ಹರಿಜನ್ ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದು, ನಾಲ್ಕು ತಿಂಗಳ ಹಿಂದಷ್ಟೇ ಮನೆಗೆ ಬಂದಿದ್ದನಂತೆ. ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದ ಅವನ ಮರ್ಮಾಂಗವನ್ನು ಹರಿತವಾದ ಚಾಕುವಿನಿಂದ ಗಂಗೀ ಕತ್ತರಿಸಿ ಹಾಕಿದ್ದಾಳೆ. ನೋವಿನಿಂದ ಕಿರುಚಾಡುತ್ತಿದ್ದ ಸದಾಶಿವನನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. 
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ.
SCROLL FOR NEXT