ದೇಶ

ಪ್ರಿಯಾಂಕಾ ಗಾಂಧಿ ಮಾನಸಿಕ ಅಸ್ವಸ್ಥೆ, ಆಕೆ ಜನರನ್ನು ಥಳಿಸಬಹುದು: ಸುಬ್ರಮಣಿಯನ್ ಸ್ವಾಮಿ ವಿವಾದ

Raghavendra Adiga
ನವದೆಹಲಿ: ಇತ್ತೀಚೆಗೆ ಪೂರ್ವ ಉತ್ತರ ಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿ ನೇಮಕವಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಬೈಪೋಲಾರ್ ಮಾನಸಿಕ ಸಮಸ್ಯೆ ಇದೆ. ಅವರು ಜನರನ್ನು ಥಳಿಸುತ್ತಾರೆ ಎಂದು ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿರುವುದು ಹೊಸ ವಿವಾದವನ್ನು ಹುಟ್ಟು ಹಾಕಿದೆ.
"ಆಕೆ (ಪ್ರಿಯಾಂಕಾ) ಮಾನಸಿಕ ಸಮಸ್ಯೆ - ಬೈಪೋಲಾರ್ ನಿಂದ ಬಳಲುತ್ತಿದ್ದಾರೆ.ಅವರು ಜನರನ್ನು ಥಳಿಸುತ್ತಾರೆ.ಅವರ ಕಾಯಿಲೆಯು ಅವರಿಗೆ ಸಾರ್ವಜನಿಕ ಜೀವನವನ್ನು ಯಶಸ್ವಿಯಾಗಿ ಮುನ್ನಡೆಸಲು ಬಿಡುವುದಿಲ್ಲ. ಆಕೆ ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನುವುದನ್ನು ಜನರು ಅರಿತಿರಬೇಕು" ಸ್ವಾಮಿ ಎಎನ್ ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ಬಿಜೆಪಿ ನಾಯಕ ಸ್ವಾಮಿ ಇದೇ ಮೊದಲ ಬಾರಿಗೆ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. 
ಆದರೆ ಪ್ರಿಯಾಂಕಾ ವಿರುದ್ಧ ಬೇರೆ ಬೇರೆ ಬಿಜೆಪಿ ನಾಯಕರೂ ಕೂಡ ಇದುವರೆಗೆ ಸಾಕಷ್ಟು ರೀತಿಯಲ್ಲಿ ವಾಗ್ದಾಳಿ ನಡೆಸಿರುವುದು ಇಲ್ಲಿ ಗಮನಾರ್ಹವಾಗಿದೆ.ಬಿಜೆಪಿಯ ಕೈಲಾಶ್ ವಿಜಯ್ ವರ್ಗಿಯಾ "ಕಾಂಗ್ರೆಸ್ ನಲ್ಲಿ ನಾಯಕರ ಕೊರತೆ ಇರುವ ಕಾರಣ ಚಾಕಲೇಟ್ ಮುಖಗಳನ್ನು ಚುನಾವಣೆಗೆ ಮುನ್ನ ಪರಿಚಯಿಸಲಾಗುತ್ತದೆ" ಎಂದಿದ್ದರು. ಹಾಗೆಯೇ ಬಿಹಾರದ ಸಚಿವ ವಿನೋದ್ ನಾರಾಯಣ್ ಝಾ"ಸುಂದರ ಮುಖವಿದ್ದ ಮಾತ್ರಕ್ಕೆ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ" ಎಂದು ಟೀಕಿಸಿದ್ದರು.
SCROLL FOR NEXT