ಶ್ರೀನಗರ: ಪ್ರಸಕ್ತ ವರ್ಷದ ಅಮರನಾಥ ಯಾತ್ರೆಗೆ ಇಂದು ವಿದ್ಯುಕ್ತ ಚಾಲನೆ ಚಾಲನೆ ದೊರೆಯಲಿದ್ದು, 2.234 ಯಾತ್ರಿಕರ ಮೊದಲ ತಂಡ ಭಾನುವಾರ ಬಿಗಿ ಭದ್ರತೆಯೊಂದಿಗೆ ಜಮ್ಮು ತಲುಪಿದೆ.
46 ದಿನಗಳ ಕಾಲ ನಡೆಯುವ ಈ ಯಾತ್ರೆಗಾಗಿ ದೇಶಾದ್ಯಂತ ಈಗಾಗಲೇ ಸುಮಾರು 1.5 ಲಕ್ಷ ಯಾತ್ರಿಕರು ನೋಂದಾಯಿಸಿಕೊಂಡಿದ್ದಾರೆ.ಹಿಂಸೆ ಮುಕ್ತ ಅಮರನಾಥ ಯಾತ್ರೆಗಾಗಿ ಕಣಿವೆ ರಾಜ್ಯದಲ್ಲಿ 300 ಪ್ಯಾರಾಮಿಲಿಟರಿ ಪಡೆಯ ತುಕಡಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಜಮ್ಮು- ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹರ್ ಗಾಮ್ - ಗಂದೇರ್ ಬಾಲ್ ಜಿಲ್ಲೆಯ ಬಲ್ತಾಲ್ ಮಾರ್ಗದಲ್ಲಿ ಯಾತ್ರೆ ಸಾಗಲಿದೆ. ಜಮ್ಮುವಿನಿಂದ ದಕ್ಷಿಣ ಕಾಶ್ಮೀರದ ಸುಮಾರು 3880 ಮೀಟರ್ ಎತ್ತರದಲ್ಲಿರುವ ಅಮರನಾಥ್ ಗುಹಾಂತರ ದೇವಾಲಯವರೆಗೂ ಡ್ರೋನ್ ಗಳು, ಯುಎವಿಗಳು, ಐಪಿ ಆಧರಿತ ಸಿಸಿಟಿವಿ ಕ್ಯಾಮರಾ ಸೇರಿದಂತೆ ತಾಂತ್ರಿಕ ನಿಗಾ ವ್ಯವಸ್ಥೆ ಮಾಡಲಾಗಿದೆ.
ಅಮರನಾಥ ಯಾತ್ರೆಗೆ ಯಾವುದೇ ಬೆದರಿಕೆ ಬಂದಿಲ್ಲ ಆದರೆ, ಮುಂಜಾಗ್ರತಾ ಕ್ರಮವಾಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. 40 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 400 ಸಿಸಿಟಿವಿಗಳು, ಸಿಆರ್ ಪಿಎಫ್ ಯೋಧರನ್ನೊಳಗೊಂಡ ವಿಶೇಷ ಮೋಟಾರ್ ಸೈಕಲ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಸಿಆರ್ ಪಿಎಫ್ ಇನ್ಸ್ ಪೆಕ್ಟರ್ ಜನರಲ್ ರವಿದೀಪ್ ಸಿಂಗ್ ಸಾಯಿ ಹೇಳಿದ್ದಾರೆ.
ಪ್ರತಿಯೊಂದು ವಾಹನಕ್ಕೂ ರೇಡಿಯೋ ಫ್ರೀಕೆನ್ಸಿ ಐಡೆಂಟಿಪಿಕೇಷನ್ ಟ್ಯಾಗ್ ಅಳವಡಿಸಲಾಗಿದೆ. ಸುರಕ್ಷತೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಯಾತ್ರಿಕನಿಗೂ ಬಾರ್ ಕೋಡ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಐಜಿ ತಿಳಿಸಿದ್ದಾರೆ.