ಕರ್ತಾರ್ ಪುರ ಕಾರಿಡಾರ್ ಮಾತುಕತೆಗೆ ಜುಲೈ 14ರ ದಿನಾಂಕ ನಿಗದಿಪಡಿಸಿದ ಪಾಕ್
ಇಸ್ಲಮಾಬಾದ್: ಕರ್ತಾರ್ ಪುರ ಕಾರಿಡಾರ್ ನಿರ್ಮಾಣ ಹಾಗೂ ಇತರ ತಾಂತ್ರಿಕ ವಿಷಯಗಳ ಚರ್ಚೆಗೆ ಭಾರತದೊಂದಿಗಿನ ಎರಡನೇ ಸುತ್ತಿನ ಚರ್ಚೆ ವಾಗಾ ಪ್ರದೇಶದಲ್ಲಿ ಜುಲೈ 14ರಂದು ನಡೆಯಲಿದೆ ಎಂದು ಪಾಕಿಸ್ತಾನ ಮಂಗಳವಾರ ತಿಳಿಸಿದೆ.
ಈ ಸಂಬಂಧ ಆಗಲೇ ಭಾರತಕ್ಕೆ ಮಾಹಿತಿ ನೀಡಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ಕರ್ತಾರ್ ಪುರ ಕಾರಿಡಾರ್ ಯೋಜನೆಗೆ ಸಂಬಂಧಿಸಿದ ಮಾತುಕತೆಗೆ ಜುಲೈ 11ರಿಂದ 14ರೊಳಗೆ ಅಟಾರಿ-ವಾಘಾ (ಪಾಕಿಸ್ತಾನದ ಕಡೆ) ಪ್ರದೇಶವನ್ನು ಆಯ್ಕೆ ಮಾಡಿ ಭಾರತ ಈ ಹಿಂದೆ ಪಾಕಿಸ್ತಾನಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
2019ರ ನವೆಂಬರ್ ನಲ್ಲಿ ನಡೆಯಲಿರುವ ಬಾಬಾ ಗುರು ನಾನಕ್ ಅವರ 550ನೇ ಜನ್ಮ ಶತಮಾನೋತ್ಸವದ ಆಚರಣೆಯ ಹಿನ್ನೆಲೆಯಲ್ಲಿ ಕರ್ತಾರ್ ಪುರ ಕಾರಿಡಾರ್ ಅನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಪಾಕಿಸ್ತಾನ ಬದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕಾರಿಡಾರ್ ನಿರ್ಮಾಣ ಸಂಬಂಧ ಉಭಯ ರಾಷ್ಟ್ರಗಳು ಇಲ್ಲಿಯವರೆಗೆ ಮೂರು ಸುತ್ತಿನ ತಾಂತ್ರಿಕ ಮಟ್ಟದ ಚರ್ಚೆಗಳನ್ನು ನಡೆಸಿದ್ದು, ತಜ್ಞರು ಯೋಜನೆಯ ವಿನ್ಯಾಸ, ಅದರ ಭೇಟಿಯ ಅವಧಿ, ಗಡಿ ಭಾಗದ ನಿಯಮಗಳು, ಮೂಲಸೌಕರ್ಯಗಳ ಕುರಿತು ಅಂತಿಮಗೊಳಿಸಲು ಯತ್ನಿಸಿದ್ದಾರೆ.
2018ರ ನವೆಂಬರ್ 26ರಂದು ಭಾರತ ಗುರ್ದಾಸ್ ಪುರ ಜಿಲ್ಲೆಯಲ್ಲಿ ಕರ್ತಾರ್ ಪುರ ಕಾರಿಡಾರ್ ಗೆ ಶಂಕುಸ್ಥಾಪನೆ ನೆರವೇರಿಸಿತ್ತು. ಎರಡು ದಿನಗಳ ನಂತರ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಲಾಹೋರ್ ನಿಂದ 125 ಕಿಮೀ ದೂರವಿರುವ ನರೋವರ್ ನಲ್ಲಿ ಕಾರಿಡಾರ್ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ್ದರು.
ಕರ್ತಾರ್ ಪುರ ಪಾಕಿಸ್ತಾನದ ನರೋವಲ್ ಜಿಲ್ಲೆಯ ರಾವಿ ನದಿಯ ತಟದಲ್ಲಿದ್ದು, ದೇರಾಬಾಬ ನಾನಕ್ ನಿಂದ 4 ಕಿಮೀ ದೂರದಲ್ಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos