ಕೊಲ್ಕತ್ತಾ: ಎಲ್ಲರನ್ನೊಳಗೊಂಡ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಧರ್ಮದ ಬಗ್ಗೆ ಸಮರ್ಥಿಸಿಕೊಂಡಿದ್ದ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಸಾಮಾಜಿಕ ಸೌಹಾರ್ದತೆಯ ಮನೋಭಾವದಿಂದ ಉತ್ತೇಜಿತಗೊಂಡಿರುವ ಇಸ್ಕಾನ್ ಗುರುವಾರ ನಡೆಯಲಿರುವ ರಥಯಾತ್ರೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಅವರಿಗೆ ಆಹ್ವಾನ ನೀಡಿದೆ.
ಇಸ್ಕಾನ್ ಅಧಿಕೃತ ಆಹ್ವಾನವನ್ನು ನುಸ್ರತ್ ಜಹಾನ್ ಸ್ವೀಕರಿಸಿದ್ದು, ಧನ್ಯವಾದ ಹೇಳಿದ್ದಾರೆ. 1971ರಿಂದಲೂ ಇಸ್ಕಾನ್ ನಿಂದ ರಾಷ್ಟ್ರಯಾತ್ರೆಯನ್ನು ಆಯೋಜಿಸುತ್ತಾ ಬರಲಾಗಿದ್ದು, 48 ನೇ ಆವೃತ್ತಿಯ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉದ್ಘಾಟಿಸಲಿದ್ದಾರೆ.
ಕೊಲ್ಕತ್ತಾ ಮೂಲದ ಉದ್ಯಮಿಯನ್ನು ಇತ್ತೀಚಿಗೆ ವರಿಸಿದ ಜಹಾನ್, ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕಾರದ ವೇಳೆ ತಮ್ಮ ಧರ್ಮದ ಬುರ್ಖಾ ತೊಡದೆ ಸಿಂಧೂರ ಮತ್ತು ಬಳೆಗಳನ್ನು ಉಟ್ಟು ಸೀರೆ ತೊಟ್ಟಿದ್ದಕ್ಕೆ ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು. ಜಾತಿ, ಧರ್ಮವನ್ನು ಮೀರಿದ ಎಲ್ಲರನ್ನೊಳಗೊಂಡ ಭಾರತವನ್ನು ತಾನು ಪ್ರತಿನಿಧಿಸುತ್ತಿದ್ದೇನೆ ಎಂದು ನುಸ್ರತ್ ಜಹಾನ್ ಹೇಳಿಕೆ ನೀಡಿದ್ದರು.
ರಥಯಾತ್ರೆಯ ಆಹ್ವಾನವನ್ನು ಒಪ್ಪಿಕೊಂಡಿರುವ ನುಸ್ರತ್ ಜಹಾನ್ ಅವರಿಗೆ ಟ್ವೀಟ್ ಮೂಲಕ ಧನ್ಯವಾದ ಹೇಳಿರುವ ಇಸ್ಕಾನ್ ವಕ್ತಾರ ರಾಧರಮಣ್ ದಾಸ್, ದೇಶದ ಪ್ರಗತಿಯನ್ನು ತೋರಿಸಿದ್ದೀರಿ ಎಂದು ಹೇಳಿದ್ದಾರೆ.
ರಥಯಾತ್ರೆ ಸಾಮಾಜಿಕ ಸೌಹಾರ್ದತೆಗೆ ಉದಾಹರಣೆಯಾಗಿದೆ. ಕೃಷ್ಣನ ರಥವನ್ನು ಮುಸ್ಲಿಂ ಸಹೋದರರು ನಿರ್ಮಿಸಲಿದ್ದಾರೆ. ಕೃಷ್ಣನನ್ನು ಆಲಂಕರಿಸುವ ವಸ್ತ್ರಗಳು ಕೂಡಾ ಮುಸ್ಲಿಂ ಸಹೋದರರೇ ಅನೇಕ ವರ್ಷಗಳಿಂದ ಮಾಡುತ್ತಾ ಬಂದಿರುವುದಾಗಿ ದಾಸ್ ಹೇಳಿದ್ದಾರೆ. ಜಗನ್ನಾಥ, ಬಲರಾಮ, ಹಾಗೂ ಸುಭದ್ರ ರಥ ಎಳೆಯಲಾಗುತ್ತಿದ್ದು, ಲಕ್ಷಾಂತರ ಮಂದಿ ಭಕ್ತಾಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.